ಶಿವಮೊಗ್ಗ, ಅ. 1: ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೈಮರ – ಅರಹತೊಳಲು ಗ್ರಾಮಗಳ ನಡುವೆ ಶನಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಬೈಕ್ ವೊಂದರಲ್ಲಿದ್ದ ಮೂವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಂದು ಬೈಕ್ ನಲ್ಲಿದ್ದ ಯುವಕ ಗಾಯಗೊಂಡ ಘಟನೆ ನಡೆದಿದೆ.
ಹಳೇ ಜಂಬರಘಟ್ಟ ಗ್ರಾಮದ ನಿವಾಸಿಗಳಾದ ವಿಕಾಸ್ (18), ಯಶವಂತ್ (18) ಹಾಗೂ ಶಶಾಂಕ್ (18) ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ. ಮೂವರು ಪಿಯುಸಿ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಗಗನ್ ಎಂಬ ಯುವಕನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿಯನ್ನು ಓವರ್ ಟೇಕ್ ಮಾಡುವ ವೇಳೆ ಅಪಘಾತ ಸಂಭವಿಸಿದೆ. ಬೈಕ್ ನಲ್ಲಿದ್ದ ಮೂವರು ಯುವಕರು ಲಾರಿಯಡಿ ಬಿದ್ದಿದ್ದಾರೆ. ಮತ್ತೊಂದು ಬೈಕ್ ನಲ್ಲಿದ್ದ ಯುವಕ ಮತ್ತೊಂದು ಬದಿ ಬಿದ್ದಿದ್ದಾನೆ ಎಂದು ಹೇಳಲಾಗಿದೆ. ಘಟನೆಯ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಪಘಾತದ ಕುರಿತಂತೆ ಇನ್ನಷ್ಟೆ ಹೆಚ್ಚಿವ ವಿವರಗಳು ತಿಳಿದುಬರಬೇಕಾಗಿದೆ. ಘಟನಾ ಸ್ಥಳಕ್ಕೆ ಹೊಳೆಹೊನ್ನೂರು ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲಿಸಿದ್ದಾರೆ.

