ಶಿಕಾರಿಪುರ, ಡಿ. 7: ಅಡಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳನ್ನು ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಠಾಣೆ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಭಟ್ಕಳ ಪಟ್ಟಣದ ನಿವಾಸಿಗಳಾದ ಅಬ್ರಾರ್ ಶೇಖ್ (21), ಇಮ್ರಾನ್ (20) ಹಾಗೂ ಅಬ್ದುಲ್ ವಾಹೀದ್ ತಾರ್ (22) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳ ಬಂಧನದಿಂದ ಶಿರಾಳಕೊಪ್ಪ ಹಾಗೂ ಸಾಗರ ತಾಲೂಕು ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಅಡಕೆ ಕಳವು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಗಳಿಂದ 2,41,586 ರೂ. ಮೌಲ್ಯದ 5 ಕ್ವಿಂಟಾಲ್ 14 ಕೆಜಿ ತೂಕದ ಒಣ ಅಡಕೆ ಮತ್ತು ಕೃತ್ಯಕ್ಕೆ ಬಳಸಿದ್ದ 7 ಲಕ್ಷ ರೂ. ಮೌಲ್ಯದ ಬುಲೆರೋ ಕಾರು ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ ಇವುಗಳ ಮೌಲ್ಯ 9,41,586 ರೂ.ಗಳಾಗಿದೆ ಎಂದು ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಕಳೆದ 17-11-2023 ರಂದು ಶಿರಾಳಕೊಪ್ಪ ಸಮೀಪದ ಬಳ್ಳಿಗಾವಿಯ ರಮೇಶ್ ಎಂಬುವರು ತಮ್ಮ ವಾಸದ ಮನೆಯ ಮುಂದಿನ ಕಟ್ಟೆಯ ಮೇಲಿರಿಸಿದ್ದ 3 ಕ್ವಿಂಟಾಲ್ 50 ಕೆಜಿ ತೂಕದ ಒಣ ಅಡಕೆಯನ್ನು ಕಳವು ಮಾಡಲಾಗಿತ್ತು. ಈ ಕುರಿತಂತೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಶಿವಾನಂದ ಮದರಖಂಡಿ ಮಾರ್ಗದರ್ಶನದಲ್ಲಿ ಸಿಪಿಐ ರುದ್ರೇಶ್, ಸಬ್ ಇನ್ಸ್’ಪೆಕ್ಟರ್ ಮಂಜುನಾಥ್ ಎಸ್ ಕುರಿ,
ಸಿಬ್ಬಂದಿಗಳಾದ ಸಂತೋಷ್, ಸಲ್ಮಾನ್ ಖಾನ್, ಕಾರ್ತಿಕ್, ಅಶೋಕ ನಾಯ್ಕ್, ನಾಗರಾಜ, ಎಸ್ಪಿ ಕಚೇರಿಯ ತಾಂತ್ರಿಕ ಸಿಬ್ಬಂದಿಗಳಾದ ಹೆಚ್.ಸಿ.ಗುರುರಾಜ್, ಇಂದ್ರೇಶ್, ವಿಜಯ್ ರವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ಧಾರೆ.

