ಹಂತಕನ ಸಮ್ಮುಖದಲ್ಲಿಯೇ ಕಾಲುವೆಯಲ್ಲಿ ಹೂತ್ತಿದ್ದ ಯುವತಿಯ ಶವ ಹೊರತೆಗೆದ ಪೊಲೀಸರು..!

Police exhumed the body of a young woman who was buried in the canal in the presence of the killer..! ಹಂತಕನ ಸಮ್ಮುಖದಲ್ಲಿಯೇ ಕಾಲುವೆಯಲ್ಲಿ ಹೂತ್ತಿದ್ದ ಯುವತಿಯ ಶವ ಹೊರತೆಗೆದ ಪೊಲೀಸರು..!

ಸಾಗರ (sagar), ಜು. 25: ಸಾಗರ ತಾಲೂಕಿನ ಆನಂದಪುರ ರೈಲ್ವೆ ಹಳಿ ಸಮೀಪದ ಕಾಲುವೆಯಲ್ಲಿ ಹೂಳಲಾಗಿದ್ದ ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ನಿವಾಸಿ ಸೌಮ್ಯ (27) ಶವವನ್ನು (soumya murder case) ಆರೋಪಿ ಪ್ರಿಯತಮನ ಸಮ್ಮುಖದಲ್ಲಿಯೇ ಗುರುವಾರ ಪೊಲೀಸರು ಹೊರತೆಗೆದಿದ್ದಾರೆ.

ಪ್ರಿಯತಮ ಸೃಜನ್ (25) ನೀಡಿದ ಮಾಹಿತಿ ಆಧಾರದ ಮೇಲೆ, ಹೂಳಲಾಗಿದ್ದ ಶವವನ್ನು (dead body) ಪೊಲೀಸರು ಹೊರತೆಗೆದಿದ್ದಾರೆ. ಈ ವೇಳೆ ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸರ್ಕಾರಿ ವೈದ್ಯರ ಮೂಲಕ ಮರಣೋತ್ತರ ಪರೀಕ್ಷೆ (postmortem examination) ನಡೆಸಿ, ಶವವನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ.

ಏನೀದು ಘಟನೆ? : ಕೊಪ್ಪದ (koppa town) ಯುವತಿ ಸೌಮ್ಯ ಹಾಗೂ ಸಾಗರ ತಾಲೂಕು ತಾಳಗುಪ್ಪದ (sagar talaguppa) ಯುವಕ ಸೃಜನ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು (loved). ತೀರ್ಥಹಳ್ಳಿಯ (thirthahalli) ಫೈನಾನ್ಸ್ ವೊಂದರಲ್ಲಿ ಸೃಜನ್ ಕೆಲಸ ಮಾಡುತ್ತಿದ್ದ. ಸದರಿ ಫೈನಾನ್ಸ್ ನಲ್ಲಿಯೇ ಸೌಮ್ಯ ತಾಯಿ ಕೂಡ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.

ಈ ವೇಳೆ ಸೌಮ್ಯ ಪರಿಚಯವಾಗಿದೆ. ಇದು ಪ್ರೇಮಕ್ಕೆ ತಿರುಗಿದೆ. ನಂತರ ಆರೋಪಿ ಫೈನಾನ್ಸ್ ನಲ್ಲಿನ (finance) ಕೆಲಸ ಬಿಟ್ಟು ತನ್ನ ಊರಿಗೆ ಹಿಂದಿರುಗಿದ್ದ. ಕೆಲ ಕಾರಣಗಳಿಂದ ಇವರಿಬ್ಬರ ನಡುವೆ ವೈಮನಸ್ಸು ಸೃಷ್ಟಿಯಾಗಿತ್ತು. ಈ ನಡುವೆ ಯುವತಿಯು ಮದುವೆಯಾಗುವಂತೆ ಒತ್ತಾಯಿಸಲಾರಂಭಿಸಿದ್ದಳು.

ಕಳೆದ ಜುಲೈ 2 ರಂದು ಯುವತಿಯು ಕೊಪ್ಪದಿಂದ ಸಾಗರಕ್ಕೆ ಆಗಮಿಸಿದ್ದಳು. ಆರೋಪಿಯು ತನ್ನ ಬೈಕ್ ನಲ್ಲಿ ಯುವತಿಯನ್ನು ರಿಪ್ಪನ್’ಪೇಟೆ (ripponpet) ಸಮೀಪದ ಹೆದ್ದಾರಿಪುರಕ್ಕೆ ಕರೆತಂದಿದ್ದ. ಮನೆಗೆ ಹೋಗುವಂತೆ ಸೂಚಿಸಿದ್ದ. ಆದರೆ ಇದಕ್ಕೆ ಯುವತಿ ಒಪ್ಪಿಕೊಂಡಿರಲಿಲ್ಲ. ಮದುವೆಯಾಗುವಂತೆ ಪಟ್ಟು ಹಿಡಿದಿದ್ದಳು ಎನ್ನಲಾಗಿದೆ.

ಈ ವೇಳೆ ಇವರಿಬ್ಬರ ನಡುವೆ ಜಗಳವಾಗಿದೆ. ಆರೋಪಿಯು ಯುವತಿಯ ಮೇಲೆ ಹಲ್ಲೆ ನಡೆಸಿದ್ದ. ಕೆಳಕ್ಕೆ ಬಿದ್ದ ಯುವತಿ ಕುತ್ತಿಗೆ ಮೇಲೆ ಕಾಲಿಟ್ಟು, ಉಸಿರುಗಟ್ಟಿಸಿ (Suffocate) ಸಾಯಿಸಿದ್ದ. ಹೆದ್ದಾರಿಪುರ ಅರಣ್ಯದಲ್ಲಿ ಶವವಿಟ್ಟು, ಬೈಕ್ ನಲ್ಲಿ ಸಾಗರಕ್ಕೆ ಆಗಮಿಸಿ ಕಾರು ತಂದಿದ್ದ.

ಯುವತಿಯ ಶವವನ್ನು ಕಾರಿನಲ್ಲಿ ತಂದು, ಆನಂದಪುರದ (anandapurua) ರೈಲ್ವೆ ಹಳಿ ಸಮೀಪ ಜಲಜೀವನ್ ಕಾಮಗಾರಿಗೆ ತೆಗೆದಿದ್ದ ಕಾಲುವೆಯಲ್ಲಿ ಹಾಕಿ ಹೂತ್ತಿದ್ದ. ಈ ನಡುವೆ ಯುವತಿಯ ಪೋಷಕರು ಜು. 3 ರಂದು ಕೊಪ್ಪ ಪೊಲೀಸ್ ಠಾಣೆಯಲ್ಲಿ (koppa police station) ನಾಪತ್ತೆ ದೂರು (missing complaint) ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಯುವತಿಯ ಮೊಬೈಲ್ ಫೋನ್ ಕರೆಗಳ (mobile phone calls detail) ಮಾಹಿತಿ ಸಂಗ್ರಹಿಸಿದ್ದರು. ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಯುವತಿಯ ಕೊಲೆ (murder) ಮಾಡಿದ್ದ ವಿಷಯ ಬಾಯ್ಬಿಟ್ಟಿದ್ದ.

ಸದರಿ ಪ್ರಕರಣವನ್ನು ಕೊಪ್ಪ ಪೊಲೀಸರು, ಯುವತಿಯ ಹತ್ಯೆ ನಡೆದಿದ್ದ ಸ್ಥಳದ ಠಾಣಾ ವ್ಯಾಪ್ತಿಯಾದ ರಿಪ್ಪನ್’ಪೇಟೆ ಠಾಣೆಗೆ (ripponpet police station) ವರ್ಗಾಯಿಸಿದ್ದಾರೆ. ತೀರ್ಥಹಳ್ಳಿ (thirthahalli) ಡಿವೈಎಸ್ಪಿ ಅವರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →