
ಹಾಸ್ಟೆಲ್ ಗಳಿಗೆ ಶಿವಮೊಗ್ಗ ಜಿಪಂ ಸಿಇಓ ದಿಢೀರ್ ಭೇಟಿ : ಖಡಕ್ ವಾರ್ನಿಂಗ್!
ವರದಿ : ಬಿ. ರೇಣುಕೇಶ್
ಭದ್ರಾವತಿ (bhadravati), ಜು. 31: ಶಿವಮೊಗ್ಗ ಜಿಲ್ಲಾ ಪಂಚಾಯ್ತಿ (zilla panchayat) ಮುಖ್ಯ ಕಾರ್ಯನಿರ್ವಹಣಾಧಿಕಾರಿ (ceo) ಹೇಮಂತ್ ಎನ್ ಅವರು, ಭದ್ರಾವತಿ ತಾಲೂಕಿನ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಗೆ ದಿಢೀರ್ ಭೇಟಿ ನೀಡಿ (sudden visit) ಪರಿಶೀಲಿಸಿದ ಘಟನೆ ನಡೆದಿದೆ.
ಜಿಲ್ಲೆಯ ಕೆಲ ಸರ್ಕಾರಿ ಹಾಸ್ಟೆಲ್ ಗಳಲ್ಲಿ (govt hostels) ವಿದ್ಯಾರ್ಥಿಗಳಿಗೆ ನ್ಯಾಯಬದ್ಧ ಸೌಲಭ್ಯಗಳು ದೊರಕುತ್ತಿಲ್ಲ. ಅವ್ಯವಸ್ಥೆಯ ಆಗರವಾಗುತ್ತಿರು ದೂರುಗಳ ಕುರಿತಂತೆ, ‘ಉದಯ ಸಾಕ್ಷಿ’ ( www.udayasaakshi.com ) ನ್ಯೂಸ್ ವೆಬ್’ಸೈಟ್ ವಿಸ್ತೃತ ವರದಿ ಪ್ರಕಟಿಸಿತ್ತು.
ಪರಿಶೀಲನೆ : ಹಾಸ್ಟೆಲ್ ನ ಅಡುಗೆ ಕೋಣೆ, ಶೌಚಾಲಯ ಸೇರಿದಂತೆ ಪ್ರತಿಯೊಂದು ಕೊಠಡಿಗೂ ಸಿಇಓ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆಯ ಕೂಲಂಕಷ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿದ್ದಾರೆ. ಹಾಸ್ಟೆಲ್ ನಲ್ಲಿ ಲಭ್ಯವಾಗುತ್ತಿರುವ ಸೌಲಭ್ಯ, ಕುಡಿಯುವ ನೀರಿನ ಶುದ್ಧತೆ ಹಾಗೂ ಶುಚಿತ್ವದ ಕುರಿತಂತೆ ಮಾಹಿತಿ ಕಲೆ ಹಾಕಿದ್ದಾರೆ.
ನಂತರ ವಿದ್ಯಾರ್ಥಿಗಳೊಂದಿಗೆ ಹಾಸ್ಟೆಲ್ ನಲ್ಲಿ ಊಟ ಮಾಡಿದ್ದಾರೆ. ಆಹಾರದ ಗುಣಮಟ್ಟ (food quality) ಪರಿಶೀಲನೆ ನಡೆಸಿದ್ದಾರೆ. ‘ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಲಭ್ಯವಾಗುವ ಸೌಲಭ್ಯಗಳನ್ನು ನಿಯಮಾನುಸಾರ ವಿತರಣೆ ಮಾಡಬೇಕು’ ಎಂದು ಹಾಸ್ಟೆಲ್ ಸಿಬ್ಬಂದಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
‘ವಸತಿ ನಿಲಯದ ವಿದ್ಯಾರ್ಥಿಗಳು (students) ಶಿಸ್ತು ಮತ್ತು ಜವಾಬ್ದಾರಿಗಳನ್ನು ತಪ್ಪದೆ ಪಾಲಿಸಬೇಕು. ಇದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ’ ಎಂದು ಇದೇ ವೇಳೆ ವಿದ್ಯಾರ್ಥಿಗಳಿಗೆ ಸಿಇಓ ಹೇಮಂತ್ ಎನ್ (shimoga zp ceo hemanth n) ಅವರು ಕಿವಿಮಾತು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಭದ್ರಾವತಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು, ವಸತಿ ನಿಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು.
ದಿಢೀರ್ ಭೇಟಿಗಳು ಇನ್ನಷ್ಟು ಹೆಚ್ಚಾಗಲಿ…
*** ಶಿವಮೊಗ್ಗ ಜಿಲ್ಲೆಯ ಕೆಲ ಸರ್ಕಾರಿ ಹಾಸ್ಟೆಲ್ ಗಳು ಅವ್ಯವಸ್ಥೆಯ ಆಗರವಾಗಿವೆ. ವಿದ್ಯಾರ್ಥಿಗಳಿಗೆ ನ್ಯಾಯಬದ್ಧ ಸೌಲಭ್ಯಗಳು ದೊರಕುತ್ತಿಲ್ಲ. ಹೇಳುವವರು, ಕೇಳುವವರು ಯಾರು ಇಲ್ಲದಂತಹ ದುಃಸ್ಥಿತಿಯಿದೆ ಎಂಬ ಸಾಲುಸಾಲು ದೂರುಗಳು ಹಾಸ್ಟೆಲ್ ವಿದ್ಯಾರ್ಥಿ ವಲಯದಿಂದ ಕೇಳಿಬರುತ್ತಿವೆ. ಇತ್ತೀಚೆಗೆ ಶಿವಮೊಗ್ಗದ ಮಲ್ಲಿಗೇನಹಳ್ಳಿಯಲ್ಲಿರುವ ಹಾಸ್ಟೆಲ್ ವಿದ್ಯಾರ್ಥಿಗಳು ರಾತ್ರೋರಾತ್ರಿ ಪ್ರತಿಭಟನೆ ಕೂಡ ನಡೆಸಿದ್ದರು. ಈ ನಡುವೆ ಜಿಲ್ಲಾ ಪಂಚಾಯ್ತಿ ಸಿಇಓ ಹೇಮಂತ್ ಎನ್ ಅವರು ಹಾಸ್ಟೆಲ್ ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾರಂಭಿಸಿರುವುದಕ್ಕೆ ಹಾಸ್ಟೆಲ್ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿಯ ದಿಢೀರ್ ಭೇಟಿಗಳು ನಿರಂತರವಾಗಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.