shimoga news | ಶಿವಮೊಗ್ಗ : ಫ್ಲೈ ಓವರ್ ಬಳಿಯಿದ್ದ ನೂರಾರು ಲೋಡ್ ಕಸದ ರಾಶಿಗೆ ಮುಕ್ತಿ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ನವೆಂಬರ್ 11: ಶಿವಮೊಗ್ಗ ನಗರದ ಕಾಶೀಪುರ ಫ್ಲೈ ಓವರ್ ಕೆಳಭಾಗದಲ್ಲಿ ಹಾಕಲಾಗಿದ್ದ, ನೂರಾರು ಲೋಡ್ ಕಸದ ರಾಶಿಯನ್ನು ಮಹಾನಗರ ಪಾಲಿಕೆ ಆಡಳಿತ ತೆರವುಗೊಳಿಸಿದೆ!
‘ಸರಿಸುಮಾರು 150 ಕ್ಕೂ ಅಧಿಕ ಲಾರಿ ಲೋಡ್ ಗಳಷ್ಟು ಕಸದ ರಾಶಿಯನ್ನು, ಸುಮಾರು 1 ವಾರಗಳ ಕಾಲ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ’ ಎಂದು ಪಾಲಿಕೆ ಆಡಳಿತ ಮೂಲಗಳು ಮಾಹಿತಿ ನೀಡುತ್ತವೆ.
ಪ್ರಸ್ತುತ ಫ್ಲೈ ಓವರ್ ಕೆಳಭಾಗದಲ್ಲಿ ನಿರ್ಮಾಣವಾಗಿದ್ದ ಕಸದ ಗುಡ್ಡಗಳು ಕಣ್ಮರೆಯಾಗಿವೆ. ದುರ್ನಾತ, ಅವ್ಯವಸ್ಥಿತ ಸ್ಥಿತಿಯೂ ಇಲ್ಲವಾಗಿದ್ದು, ಇಡೀ ಪ್ರದೇಶ ಸ್ವಚ್ಚತೆಯಿಂದ ನಳನಳಿಸುತ್ತಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.
ನಗರದ ವಿವಿಧೆಡೆಯಿಂದ ಘನತ್ಯಾಜ್ಯ ರಾಶಿ ತಂದು ಹಾಕುತ್ತಿದ್ದ ಟ್ರ್ಯಾಕ್ಟರ್, ಲಾರಿ ಚಾಲಕರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕ್ರಮಕೈಗೊಳ್ಳಲು ಪಾಲಿಕ ಆಡಳಿತ ಮುಂದಾಗಿದೆ. ಹಾಗೆಯೇ ಫ್ಲೈ ಓವರ್ ಕೆಳಭಾಗದಲ್ಲಿ ಸರಕು ಸಾಗಾಣೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಪಿಡಬ್ಲ್ಯೂಡಿ ಇಲಾಖೆ ಮೂಲಕ ಎರಡು ಕಡೆ ಶಾಶ್ವತವಾಗಿ ಗೇಟ್ ಹಾಕುವ ವ್ಯವಸ್ಥೆ ಮಾಡಲಾಗುತ್ತಿದೆ.
ವರದಿ ಫಲಶೃತಿ : ಫ್ಲೈ ಓವರ್ ಕೆಳಭಾಗದಲ್ಲಿ ಭಾರೀ ಪ್ರಮಾಣದ ಕಸದ ರಾಶಿ ಬಿದ್ದಿರುವುದು ಹಾಗೂ ಟ್ರ್ಯಾಕ್ಟರ್ – ಲಾರಿಗಳಲ್ಲಿ ರಾತ್ರಿ ವೇಳೆ ಕೆಲವರು ಘನತ್ಯಾಜ್ಯ ವಸ್ತುಗಳನ್ನು ನಿರಂತರವಾಗಿ ತಂದು ಹಾಕುತ್ತಿರುವ ಕುರಿತಂತೆ www.udayasaakshi.com ನ್ಯೂಸ್ ವೆಬ್’ಸೈಟ್ ಹಾಗೂ youtube.com/@UdayaSaakshi?si=umpphZcRLlKEN9JU ಯೂಟ್ಯೂಬ್ ನ್ಯೂಸ್ ಚಾನಲ್ ಸವಿಸ್ತಾರ ವರದಿ ಬಿತ್ತರಿಸಿತ್ತು.
ವರದಿ ಪ್ರಕಟಗೊಂಡ ಬೆನ್ನಲ್ಲೇ, ಎಚ್ಚೆತ್ತ ಮಹಾನಗರ ಪಾಲಿಕೆ ಆಡಳಿತ ಸ್ಥಳದಲ್ಲಿ ಬಿದ್ದಿದ್ದ ನೂರಾರು ಲೋಡ್ ಕಸದ ರಾಶಿ ತೆರವುಗೊಳಿಸಿದೆ. ಪಾಲಿಕೆ ಆಯುಕ್ತ ಮಾಯಣ್ಣಗೌಡರ ಸೂಚನೆಯಂತೆ ಪರಿಸರ ವಿಭಾಗದ ಎಂಜಿನಿಯರ್ ಗಳಾದ ಪುಪ್ಟಾವತಿ, ತ್ರಿವೇಣಿ, ಹೆಲ್ತ್ ಇನ್ಸ್’ಪೆಕ್ಟರ್ ಲೋಹಿತ್ ಯಾದವ್, ವಾರ್ಡ್ ಮೇಸ್ತ್ರಿ ನೇತ್ರಾವತಿರವರು ಸ್ಥಳ ಪರಿಶೀಲಿಸಿದ್ದರು.
ಕಸ ತೆರವಿಗೆ ಕ್ರಮಕೈಗೊಂಡಿದ್ದರು. ಪಾಲಿಕೆ ಜೆಸಿಬಿ ಆಪರೇಟರ್ ಹರ್ಷ, ಸಹಾಯಕರಾದ ವಿಲಿಯಂ ಹಾಗೂ ಲಾರಿ ಚಾಲಕರುಗಳು ಹಲವು ದಿನಗಳ ಕಾಲ ಕಸದ ಗುಡ್ಡವನ್ನು ತೆರವುಗೊಳಿಸಿದ್ದಾರೆ ಎಂದು ಪಾಲಿಕೆ ಆಡಳಿತ ಮೂಲಗಳು ಮಾಹಿತಿ ನೀಡುತ್ತವೆ.
ನಾಗರೀಕರ ಸಂತಸ : ಪಾಲಿಕೆ ಆಡಳಿತದ ಜನಪರ ಕಾರ್ಯಕ್ಕೆ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಯುಕ್ತರ ತ್ವರಿತ ಕ್ರಮಕ್ಕೆ ಅಭಿನಂದಿಸಿದ್ದಾರೆ. ‘ಕೆಲ ಅನಾಗರೀಕ ವ್ಯಕ್ತಿಗಳು ಟ್ರ್ಯಾಕ್ಟರ್, ಲಾರಿಗಳಲ್ಲಿ ಕಟ್ಟಡದ ಸಾಮಗ್ರಿಗಳು, ಕೊಳಚೆ ವಸ್ತುಗಳು, ಪ್ಲಾಸ್ಟಿಕ್, ಕೆಮಿಕಲ್ ಮಿಶ್ರಿತ ಸೇರಿದಂತೆ ನಾನಾ ರೀತಿಯ ತ್ಯಾಜ್ಯ ವಸ್ತುಗಳನ್ನು ಫ್ಲೈ ಓವರ್ ಕೆಳಭಾಗದಲ್ಲಿ ರಾತ್ರೋರಾತ್ರಿ ಸುರಿದು ಹೋಗುತ್ತಿದ್ದರು. ಇದನ್ನು ಪ್ರಶ್ನಿಸುವ ಸ್ಥಳೀಯರೊಂದಿಗೆ ದರ್ಪ, ದೌರ್ಜನ್ಯದಿಂದ ನಡೆದುಕೊಳ್ಳುತ್ತಿದ್ದರು’ ಎಂದು ನಿವಾಸಿಗಳು ಆರೋಪಿಸುತ್ತಾರೆ.
‘ಕಸದ ರಾಶಿ ಕುರಿತಂತೆ Udaya Saakshi ಡಿಜಿಟಲ್ ನ್ಯೂಸ್ ಹಾಗೂ ಕೆಲ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಕಸ ಹಾಕುವುದಕ್ಕೆ ಕಡಿವಾಣ ಬಿದ್ದಿದೆ. ಹಾಗೆಯೇ ಸ್ಥಳದಲ್ಲಿ ಬಿದ್ದಿದ್ದ ಭಾರೀ ಪ್ರಮಾಣದ ಕಸದ ರಾಶಿಯೂ ತೆರವುಗೊಳ್ಳುವಂತಾಗಿದೆ’ ಎಂದು ಪಿ ಅಂಡ್ ಟಿ ಕಾಲೋನಿ ಮುಖಂಡರಾದ ರಾಮಾನಾಯ್ಕ್ ಅವರು ತಿಳಿಸಿದ್ದಾರೆ.
ಬೆಂಗಳೂರು ಮಾದರಿ ಕಾರ್ಯಾಚರಣೆ ಆರಂಭಿಸಲಿ..!
*** ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ಮನೆ ಮುಂಭಾಗವೇ ಕಸ ಸುರಿಯುವ ಹಾಗೂ ದಂಡ ವಿಧಿಸುವ ಕಾರ್ಯಾಚರಣೆಯನ್ನು, ಶಿವಮೊಗ್ಗ ನಗರದಲ್ಲಿಯೂ ಮಹಾನಗರ ಪಾಲಿಕೆ ಆಡಳಿತ ಆರಂಭಿಸಬೇಕಾಗಿದೆ. ಇದರಿಂದ ಎಲ್ಲೆಂದರಲ್ಲಿ ಕಸ ಹಾಕುವುದಕ್ಕೆ ಕಡಿವಾಣ ಬೀಳಲಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಪಾಲಿಕೆ ಆಯುಕ್ತ ಮಾಯಣ್ಣ ಗೌಡರವರು ಗಮನಹರಿಸಬೇಕಾಗಿದೆ. ಈ ಮೂಲಕ ನಗರದ ಪರಿಸರಕ್ಕೆ ದೊಡ್ಡ ಪೆಡಂಭೂತವಾಗಿ ಕಾಡುತ್ತಿರುವ ಘನತ್ಯಾಜ್ಯದ ಪರಿಣಾಮಕಾರಿ ನಿರ್ವಹಣೆಗೆ ಮುಂದಾಗಬೇಕಾಗಿದೆ ಎಂಬ ಅಭಿಪ್ರಾಯಗಳು ಪ್ರಜ್ಞಾವಂತ ನಾಗರೀಕರದ್ದಾಗಿದೆ.
Shivamogga, November 11: The municipal corporation administration has finally cleared the pile of hundreds of loads of garbage that was piled up at the bottom of the Kashipura flyover in Shivamogga city! Approximately 150 truckloads of garbage have been cleared in an operation that lasted for about a week. As a result, the foul smell and untidy condition that had settled at the bottom of the flyover has disappeared. The entire area looks clean.
