
ಮುಂದುವರಿದ ಲೋಕಾಯುಕ್ತ ತಂಡದ ತಪಾಸಣೆ : ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ!
ಶಿವಮೊಗ್ಗ (shivamogga), ಜೂ. 25: ಇತ್ತೀಚೆಗೆ ಲೋಕಾಯುಕ್ತ ಪೊಲೀಸರು (lokayukta police team) ಶಿವಮೊಗ್ಗದ ಸ್ಮಾರ್ಟ್ ಸಿಟಿ (smart city) ಕಾಮಗಾರಿ ಪರಿಶೀಲಿಸಿ, ಅಕ್ರಮದ ಬಗ್ಗೆ ಮಾಹಿತಿ ಕೇಳಿದ್ದರು. ಇದರ ಬೆನ್ನಲ್ಲೇ, ಶಿವಮೊಗ್ಗದ ಸರ್ಕಾರಿ ಕಚೇರಿಯೊಂದಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ವಿನೋಬನಗರದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ (sub registrar office) ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಮಂಜುನಾಥ ಚೌದರಿ ಎಂ ಹೆಚ್ ನೇತೃತ್ವದ ತಂಡ ದಿಢೀರ್ ಭೇಟಿ (sudden visit) ನೀಡಿತ್ತು. ಅಲ್ಲಿನ ಕೆಲಸ ಕಾರ್ಯಗಳ ಖುದ್ದು ಪರಿಶೀಲನೆ ನಡೆಸಿತು.
ಕಚೇರಿಯಲ್ಲಿ (office) ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳು ಮತ್ತು ಹೊರ ಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ ಗಳ ಸಮಗ್ರ ಮಾಹಿತಿಯ ಜೊತೆಗೆ ಕಾರ್ಯನಿರ್ವಹಣೆಯ ವಿವರ ಕಲೆ ಹಾಕಿದ್ದಾರೆ.
ಹಾಗೆಯೇ ಸಿಬ್ಬಂದಿಗಳ ಹಾಜರಾತಿ ಪುಸ್ತಕ (attendance book), ಕ್ಯಾಷ್ ಡಿಕ್ಲರೇಷನ್, ಚಲನವಲನ ವಹಿ, ದಸ್ತಾವೇಜುಗಳ ರಿಜಿಸ್ಟರ್ ಗಳನ್ನು ಪರಿಶೀಲಿಸಿದ್ದಾರೆ. ಇದೆ ವೇಳೆ ಕಚೇರಿಯಲ್ಲಿ ಹಾಜರಿದ್ದ ಸಾರ್ವಜನಿಕರೊಂದಿಗೆ (publics) ಲೋಕಾಯುಕ್ತ ತಂಡ ಸಮಾಲೋಚನೆ ನಡೆಸಿದೆ.
ಪರಿಶೀಲನಾ ಸಮಯದಲ್ಲಿ ಕಚೇರಿಯಲ್ಲಿ ಕಂಡು ಬಂದ ನ್ಯೂನ್ಯತೆಗಳ (deficiency) ಕುರಿತು ಹಿರಿಯ ಉಪನೋಂದಣಾಧಿಕಾರಿ ಧನರಾಜ್ ಮತ್ತು ದಿನೇಶ್ ರವರಿಗೆ ತಿಳಿಸಿ, ಸ್ಥಳದಲ್ಲಿಯೇ ಸಲಹೆ – ಸೂಚನೆಗಳನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಡಿಎಸ್ಪಿ ಉಮೇಶ್ ಈಶ್ವರನಾಯ್ಕ್, ಪೊಲೀಸ್ ನಿರೀಕ್ಷಕ ಪ್ರಕಾಶ್ ಸೇರಿದಂತೆ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.