ಶಿವಮೊಗ್ಗ : ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳ ಅನುಷ್ಠಾನದತ್ತ ಹರಿಯುವುದೆ ಸಚಿವರ ಚಿತ್ತ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಜೂ. 24: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (congress govt) ಅಸ್ತಿತ್ವಕ್ಕೆ ಬಂದು ವರ್ಷವಾಗಿದೆ. ಆದರೆ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ, ಶಿವಮೊಗ್ಗ ಜಿಲ್ಲೆಯ ಪ್ರಮುಖ ಆಡಳಿತಾತ್ಮಕ ವಿಷಯಗಳಿಗೆ (administrative matters) ಆದ್ಯತೆ ದೊರಕಿಲ್ಲ!
ಎಂಪಿಎಂ : ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ mpm) ಪುನಾರಾರಂಭಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕಾಲಮಿತಿಯೊಳಗೆ ಕ್ರಮವಾಗಬೇಕಾಗಿದೆ. ಭದ್ರಾವತಿ ಸರ್ಕಾರಿ ಐಟಿಐ ಕಾಲೇಜ್ ನಲ್ಲಿ ಸರ್ಕಾರಿ ಏಂಜಿನಿಯರಿಂಗ್ ಕಾಲೇಜ್ (govt engineer college) ಆರಂಭಿಸುವ ಮೂಲಕ, ಬಡ –ಮಧ್ಯಮ ವರ್ಗದವರಿಗೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ.
ತಾಲೂಕು ಕೇಂದ್ರಗಳು : ಶಿವಮೊಗ್ಗ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಹೊಸ ತಾಲೂಕು ಕೇಂದ್ರಗಳ ರಚನೆಯಾಗಿಲ್ಲ. ಶಿವಮೊಗ್ಗ ನಗರ – ಗ್ರಾಮೀಣ ತಾಲೂಕು, ಭದ್ರಾವತಿಯಲ್ಲಿ ಹೊಳೆಹೊನ್ನೂರು ತಾಲೂಕು (holehonnuru), ಸೊರಬದಲ್ಲಿ ಆನವಟ್ಟ (anavatti) ಹಾಗೂ ಶಿಕಾರಿಪುರದಲ್ಲಿ ಶಿರಾಳಕೊಪ್ಪ (shiralkoppa) ತಾಲೂಕು ಕೇಂದ್ರ ರಚನೆಯ ಬೇಡಿಕೆಯಿದೆ.
ಪಾಲಿಕೆ ವ್ಯಾಪ್ತಿ ವಿಸ್ತರಣೆ : ಕಳೆದ 25 ವರ್ಷಗಳಿಂದ ಶಿವಮೊಗ್ಗ ನಗರ ವ್ಯಾಪ್ತಿ ಪರಿಷ್ಕರಣೆಯಾಗಿಲ್ಲ. ಜನಸಂಖ್ಯೆ, ನಗರ ಬೆಳವಣಿಗೆಗೆ ಅನುಗುಣವಾಗಿ ಮಹಾನಗರ ಪಾಲಿಕೆ (city corporation) ವ್ಯಾಪ್ತಿ ಪರಿಷ್ಕರಣೆಯಾಗಬೇಕಾಗಿದೆ. ವಾರ್ಡ್ ಗಳ (ward) ಸಂಖ್ಯೆ ಹೆಚ್ಚಳವಾಗಬೇಕಾಗಿದೆ.
ಪೊಲೀಸ್ ಕಮೀಷನರೇಟ್ : ರಾಜ್ಯದಲ್ಲಿ ಅತೀ ಹೆಚ್ಚು ಅಪರಾಧ ಕೃತ್ಯಗಳು ವರದಿಯಾಗುವ ನಗರಗಳಲ್ಲೊಂದಾದ ಹಾಗೂ ಕೋಮು ಸೂಕ್ಷ್ಮವಾಗಿರುವ ಶಿವಮೊಗ್ಗದಲ್ಲಿ ಪೊಲೀಸ್ ಬಲ ಹೆಚ್ಚಳವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ – ಭದ್ರಾವತಿ ನಗರ ಒಳಗೊಂಡಂತೆ, ಪೊಲೀಸ್ ಕಮೀಷನರೇಟ್ (Police Commissionerate) ಸ್ಥಾಪನೆಯಾಗಬೇಕಾಗಿದೆ. ಹಾಗೆಯೇ ಜಿಲ್ಲೆಯ ವಿವಿಧೆಡೆ ಹೊಸ ಪೊಲೀಸ್ ಠಾಣೆಗಳ (police stations) ಬೇಡಿಕೆಯಿದೆ.
ಸರ್ಕಾರಿ ಸಿಟಿ ಬಸ್ : ಶಿವಮೊಗ್ಗ, ಭದ್ರಾವತಿ ನಗರಗಳಲ್ಲಿ ಈ ಹಿಂದೆ ಸಂಚರಿಸುತ್ತಿದ್ದ ಜೆನ್ ನರ್ಮ್ ಯೋಜನೆಯ ಸರ್ಕಾರಿ ಸಿಟಿ (govt city bus) ಬಸ್ ಗಳು ಸಮರ್ಪಕವಾಗಿ ಸಂಚರಿಸುತ್ತಿಲ್ಲ. ಪ್ರತ್ಯೇಕ ಸರ್ಕಾರಿ ಸಿಟಿ ಬಸ್ ಡಿಪೋ, ಸಿಟಿ ಬಸ್ ಸ್ಟ್ಯಾಂಡ್ ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಈ ನಿಟ್ಟಿನಲ್ಲಿಲ ಆದ್ಯ ಗಮನಹರಿಸಬೇಕಾಗಿದೆ.
ಆಯುಷ್ ವಿವಿ : ಶಿವಮೊಗ್ಗದಲ್ಲಿ ದಕ್ಷಿಣ ಭಾರತದ ಮೊಟ್ಟಮೊದಲು ಆಯುಷ್ ವಿಶ್ವ ವಿದ್ಯಾಲಯ (ayush university) ಕಾರ್ಯಾರಂಭಕ್ಕೆ ಕ್ರಮವಾಗಬೇಕಾಗಿದೆ. ರಾಜ್ಯ ಸರ್ಕಾರದಿಂದ ಈಗಾಗಲೇ ಅನುಮತಿ ದೊರಕಿರುವ ವಿವಿ ಕಾರ್ಯ ಚಟುವಟಿಕೆ ಆರಂಭಕ್ಕೆ ಅನುದಾನ ಬಿಡುಗಡೆಯಾಗಬೇಕಾಗಿದೆ. ಹಾಗೆಯೇ ಶಿವಮೊಗ್ಗದಲ್ಲಿ ರಾಜ್ಯದಲ್ಲಿಯೇ ಮಾದರಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಕ್ರಮವಾಗಬೇಕಾಗಿದೆ.
ಆಸ್ಪತ್ರೆ ಅಭಿವೃದ್ದಿ : ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯನ್ನು (govt hospital) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ, ಬಡ ರೋಗಿಗಳಿಗೆ ಸಕಲ ಚಿಕಿತ್ಸೆ ದೊರಕುವ ವ್ಯವಸ್ಥೆ ಆರಂಭಕ್ಕೆ ಕ್ರಮ. ಶಿವಮೊಗ್ಗ ಕೇಂದ್ರವಾಗಿಟ್ಟುಕೊಂಡು ಮಧ್ಯ ಕರ್ನಾಟಕಕ್ಕೆ ಪ್ರತ್ಯೇಕ ವಿದ್ಯುತ್ ವಲಯ (power zone) ಸ್ಥಾಪನೆ.
ಬಡ – ಮಧ್ಯಮ ವರ್ಗದ ವಸತಿ ರಹಿತರಿಗೆ ನಿವೇಶನ ಕಲ್ಪಿಸಲು ಜಿಲ್ಲೆಯ ನಗರ – ಪಟ್ಟಣ ಪ್ರದೇಶದಲ್ಲಿ ಆಶ್ರಯ ಯೋಜನೆಯಡಿ ಬಡಾವಣೆಗಳ ನಿರ್ಮಾಣ. ಕೇಂದ್ರ ರಾಜ್ಯ ಸರ್ಕಾರದಿಂದ ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆಗಳಿಗೆ, ರಾಜ್ಯ ಸರ್ಕಾರದ ಪಾಲಿನ ಅನುದಾನ ಬಿಡುಗಡೆ.
ಏತ ನೀರಾವರಿ ಯೋಜನೆಗಳ ಅನುಷ್ಠಾನ, ಬಗರ್ ಹುಕುಂ ಸಾಗುವಳಿ ಸಮಸ್ಯೆ ಪರಿಹಾರ, ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ, ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಹತ್ತು ಹಲವು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತಾಸಕ್ತಿ ಯೋಜನೆಗಳತ್ತ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಆದ್ಯ ಗಮನಹರಿಸಬೇಕಾಗಿದೆ ಎಂಬುವುದು ಜಿಲ್ಲೆಯ ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.
ನೆನೆಗುದಿಗೆ ಬಿದ್ದ ಆಡಳಿತಾತ್ಮಕ ವಿಷಯಗಳು!
*** ಜಿಲ್ಲೆಯವರೇ ಸಿಎಂ, ಡಿಸಿಎಂ, ಗೃಹ, ಕಂದಾಯ ಸೇರಿದಂತೆ ಸರ್ಕಾರದ ಹಂತದಲ್ಲಿ ಹೈಪ್ರೊಫೈಲ್ ಸಚಿವ ಸ್ಥಾನಗಳನ್ನು ಅಲಂಕರಿಸಿದರು ಪ್ರಮುಖ ಆಡಳಿತಾತ್ಮಕ ಬೇಡಿಕೆಗಳು ಕಾರ್ಯರೂಪಕ್ಕೆ ಬಂದಿಲ್ಲವಾಗಿದೆ. ಕೆಲ ಯೋಜನೆಗಳ ಕಡತಗಳು, ನಾನಾ ಕಾರಣಗಳಿಂದ ಸರ್ಕಾರದ ಹಂತದಲ್ಲಿ ಧೂಳು ಹಿಡಿಯುತ್ತಿವೆ. ಹಾಲಿ ಸರ್ಕಾರದ ಅವಧಿಯಲ್ಲಾದರೂ ಜಿಲ್ಲೆಯ ಪ್ರಮುಖ ಬೇಡಿಕೆಗಳು ಕಾರ್ಯಗತಗೊಳ್ಳಬೇಕಾಗಿದೆ. ಈ ಸಂಬಂಧ ಸರ್ಕಾರದ ಹಂತದಲ್ಲಿ ಸಂಬಂಧಿಸಿದ ಇಲಾಖೆ ಸಚಿವರು, ಅಧಿಕಾರಿಗಳ ಜೊತೆ ಸಮಾಲೋಚಿಸಿ ಜನಪರ ಯೋಜನೆಗಳ ಕಾರ್ಯಗತದತ್ತ ಜಿಲ್ಲಾ ಉಸ್ತುವಾರಿ ಸಚಿವರು ಆದ್ಯ ಗಮನಹರಿಸಬೇಕಾಗಿದೆ.
-: ಪ್ರಮುಖಾಂಶಗಳು :-
* ಶಿವಮೊಗ್ಗದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಸ್ಥಾಪನೆ
* ಭದ್ರಾವತಿ ಎಂಪಿಎಂ ಕಾರ್ಖಾನೆ ಪುನಾರಾರಂಭಕ್ಕೆ ಕ್ರಮ
* ಶಿವಮೊಗ್ಗ ಗ್ರಾಮಾಂತರ, ಆನವಟ್ಟಿ, ಹೊಳೆಹೊನ್ನೂರು, ಶಿರಾಳಕೊಪ್ಪ ತಾಲೂಕು ಕೇಂದ್ರ ರಚನೆ
* ಶಿವಮೊಗ್ಗ – ಭದ್ರಾವತಿ ಪೊಲೀಸ್ ಕಮೀಷನರೇಟ್ ಸ್ಥಾಪನೆ
* ಸಾಗರ ಪಟ್ಟಣದಲ್ಲಿ ಪ್ರತ್ಯೇಕ ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪನೆ
* ಶಿವಮೊಗ್ಗದಲ್ಲಿ ರಾಜ್ಯಕ್ಕೆ ಮಾದರಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಅನುದಾನ
* ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ವಾರ್ಡ್ ಗಳ ಸಂಖ್ಯೆ ಹೆಚ್ಚಳ
* ಶಿವಮೊಗ್ಗ, ಭದ್ರಾವತಿಯಲ್ಲಿ ಸರ್ಕಾರಿ ಸಿಟಿ ಬಸ್ ಗಳ ಸಂಚಾರಕ್ಕೆ ಕ್ರಮ
* ಆಯುಷ್ ವಿಶ್ವ ವಿದ್ಯಾಲಯ ಕಾರ್ಯಾರಂಭಕ್ಕೆ ಕ್ರಮ
