
shimoga | ಸಿಎಂ ಸಿದ್ದರಾಮಯ್ಯ ಗಾಬರಿಯಾಗಿದ್ದಾರೆ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದೇಕೆ?
ಶಿವಮೊಗ್ಗ (shivamogga), ಡಿ. 5: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಲೋಕಾಯುಕ್ತಕ್ಕೆ ಪತ್ರ ಬರೆದಿರುವ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ. ಇ.ಡಿ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿ. 5 ರ ಗುರುವಾರ ಶಿವಮೊಗ್ಗದ ವಿನೋಬನಗರದಲ್ಲಿರುವ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಇ.ಡಿ ಬಗ್ಗೆ ಏನೂ ಬೇಕಾದರೂ ಹೇಳಬಹುದು. ಆದರೆ ಇ.ಡಿ ಗೆ ಅಧಿಕಾರವಿದೆ. ಅವರ ತೀರ್ಮಾನವೇ ಅಂತಿಮವಾದುದು’ ಎಂದು ತಿಳಿಸಿದ್ದಾರೆ.
‘ತಮ್ಮ ವಿರುದ್ದ ಸಾಕ್ಷ್ಯ ಸಿಕ್ಕಿ ಇ.ಡಿ ಹೇಳಿಕೆ ನೀಡುತ್ತಿರುವುದರಿಂದ ಸಿಎಂ ಗಾಬರಿಯಾಗಿದ್ದಾರೆ. ಈ ಕಾರಣದಿಂದ ಇ.ಡಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಓರ್ವ ಸಿಎಂ ಆಗಿ, ಇ.ಡಿ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳಬೇಕು.
ವಾಸ್ತವ ತಿಳಿಸುವ ಕಾರ್ಯ ನಡೆಸಬೇಕು. ಆದರೆ ಇ.ಡಿ ವಿರುದ್ಧ ಹೇಳಿಕೆ ನೀಡುತ್ತಿರುವುದು ಸಿಎಂಗೆ ಶೋಭೆ ತರುವಂತದ್ದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಕುರಿತಂತೆ ಸರ್ಕಾರ ಚಿಂತನೆ ನಡೆಸುತ್ತಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಹತಾಶೆಯಿಂದ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಇದು ಶೋಭೆ ತರುವಂತದ್ದಲ್ಲ’ ಎಂದು ಪ್ರತಿಕ್ರಿಯಿಸಿದರು. ಹಾಸನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿ, ‘ಅವರ ಪಕ್ಷದ ಕಾರ್ಯಕ್ರಮ. ನಾನೇಕೆ ಟೀಕೆ ಮಾಡಲಿ’ ಎಂದು ಯಡಿಯೂರಪ್ಪ ಉತ್ತರಿಸಿದ್ದಾರೆ.
ಪರಸ್ಪರ ಕಚ್ಚಾಡುವುದರಿಂದ ಲಾಭವಿಲ್ಲ : ಯತ್ನಾಳ್ ಬಣಕ್ಕೆ ಕಿವಿಮಾತು!
‘ಬಸವನಗೌಡ ಪಾಟೀಲ್ ಯತ್ನಾಳ್ ಅವರ ಭಿನ್ನಮತ ಸೇರಿದಂತೆ, ಪಕ್ಷದಲ್ಲಿನ ಎಲ್ಲ ಗೊಂದಲಗಳು ಸುಸೂತ್ರವಾಗಿ ಪರಿಹಾರವಾಗಲಿದೆ. ಒಟ್ಟಾಗಿ, ಒಂದಾಗಿ ಹೋದರೆ ಸಾಧನೆ ಸಾಧ್ಯವಾಗಲಿದೆ. ಪರಸ್ಪರ ಕಚ್ಚಾಡುವುದರಿಂದ ಅವರಿಗಾಗಲಿ, ನಮಗಾಗಲಿ ಲಾಭವಾಗುವುದಿಲ್ಲ. ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಒಟ್ಟಾಗಿ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ನಡೆಸುವಂತೆ ಮನವಿ ಮಾಡುತ್ತೆನೆ’ ಎಂದು ಇದೇ ವೇಳೆ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
Former Chief Minister BS Yeddyurappa has defended the action taken by the Enforcement Directorate (ED) in a letter to the Lokayukta regarding the Muda case. He has expressed his anger against CM Siddaramaiah, who is protesting against the ED action.