ಶಿಕಾರಿಪುರ, ಮಾ. 24: ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪಟ್ಟಣದ ಇಬ್ಬರು ರೌಡಿ ಶೀಟರ್ ಗಳನ್ನು ಗಡಿಪಾರುಗೊಳಿಸಿ ಸಾಗರ ಉಪ ವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಶಿರಾಳಕೊಪ್ಪ ಪಟ್ಟಣದ ಗಾಂಧಿನಗರದ ನಿವಾಸಿ ಸುನೀಲ್ ಕುಮಾರ್ (54) ಹಾಗೂ ಹುಸೇನ್ ರಸ್ತೆ ಹಳ್ಳೂರು ಕೇರಿಯ ನಿವಾಸಿ ಅಬ್ದುಲ್ ಮುನಾಫ್ ಯಾನೆ ಮುನ್ನಾ ಯಾನೆ ಸ್ಟಾರ್ ಮುನ್ನಾ (48) ಗಡಿಪಾರಾದ ರೌಡಿ ಶೀಟರ್ ಗಳೆಂದು ಗುರುತಿಸಲಾಗಿದೆ.
ಸದರಿ ಆರೋಪಿಗಳು ಓಸಿ/ಮಟ್ಕಾ ಜೂಜಾಟ ನಡೆಸುವ ಪ್ರವೃತ್ತಿ ಹೊಂದಿದ್ದರು. ಜೊತೆಗೆ ರೌಡಿಸಂ ಚಟುವಟಿಕೆಗಳಲ್ಲಿಯೂ ತೊಡಗಿದ್ದರು. ಸುನೀಲ್ ಕುಮಾರ್ ವಿರುದ್ದ 8 ಪ್ರಕರಣ ಹಾಗೂ ಮುನಾಫ್ ವಿರುದ್ದ 10 ಪ್ರಕರಣಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಕಾನೂನುಬಾಹಿರ ಕೃತ್ಯ ತಡೆಗಟ್ಟುವ ಉದ್ದೇಶದಿಂದ ಇವರಿಬ್ಬರನ್ನು ಗಡಿಪಾರುಗೊಳಿಸುವಂತೆ ಶಿರಾಳಕೊಪ್ಪ ಪೊಲೀಸರು ಸಾಗರ ಉಪ ವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಗಡಿಪಾರು: 6 ತಿಂಗಳುಗಳ ಕಾಲ ಸುನೀಲ್ ಕುಮಾರ್ ನನ್ನು ಗದಗ ಜಿಲ್ಲೆಗೆ ಮತ್ತು ಅಬ್ದುಲ್ ಮುನಾಫ್ ನನ್ನು ವಿಜಯಪುರ ಜಿಲ್ಲೆಗೆ ಗಡಿಪಾರುಗೊಳಿಸಿ ಸಾಗರ ಉಪ ವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

