ಶಿವಮೊಗ್ಗ, ಎ. 5: ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆ ಸಿಬ್ಬಂದಿಗಳು ಹೊಸನಗರ ತಾಲೂಕಿನ ಹುಂಚ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಸೈಬರ್ ಅಪರಾಧ ಕುರಿತಂತೆ ಜನಜಾಗೃತಿ ಮೂಡಿಸಿದರು. ಸಾರ್ವಜನಿಕರಿಗೆ ಕರಪತ್ರ ವಿತರಣೆ ಮಾಡಿದರು.
ಮೊಬೈಲ್ ಕಳೆದುಹೋದ ಸಂದರ್ಭದಲ್ಲಿ, ಸಿಇಐಆರ್ ಸಾಫ್ಟ್’ವೇರ್ ತಂತ್ರಜ್ಞಾನದ ಮೂಲಕ ಹೇಗೆ ಪತ್ತೆ ಹಚ್ಚಿಕೊಡಲಾಗುತ್ತದೆ ಎಂಬುವುದರ ಬಗ್ಗೆ ಸಾರ್ವಜನಿಕರಿಗೆ ಸೈಬರ್ ಠಾಣೆ ಪೊಲೀಸರು ತಿಳಿ ಹೇಳಿದರು.
ಆನ್’ಲೈನ್ ಆಧಾರಿತ ವ್ಯವಹಾರದ ವೇಳೆ, ಒಟಿಪಿ ನಂಬರ್ ಹೇಳುವಂತೆ ಮೊಬೈಲ್ ಫೋನ್ ಗಳಿಗೆ ಅನಾಮಧೇಯ ಕರೆ-ಸಂದೇಶಗಳು ಆಗಮಿಸಿದ ವೇಳೆ ಅನುಸರಿಸಬೇಕಾದ ಎಚ್ಚರಿಕೆ ಕ್ರಮಗಳ ಕುರಿತಂತೆ ಸಲಹೆ-ಸೂಚನೆಗಳನ್ನು ಸಿಬ್ಬಂದಿಗಳು ನೀಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವಿಜಯ್, ಜಗದೀಶ್, ಹುಂಚ ಪೊಲೀಸ್ ಔಟ್ ಪೋಸ್ಟ್ ಸಿಬ್ಬಂದಿ ಮಂಜುನಾಥ್ ಮೊದಲಾದವರಿದ್ದರು.

