shimoga news | ಶಿವಮೊಗ್ಗ : ರಸ್ತೆಗಳ ಗುಂಡಿ – ಗೊಟರುಗಳಿಗೆ ಮುಕ್ತಿ ಯಾವಾಗ?!

Shivamogga : When will the potholes on the roads be solved?! ಶಿವಮೊಗ್ಗ : ರಸ್ತೆಗಳ ಗುಂಡಿ – ಗೊಟರುಗಳಿಗೆ ಮುಕ್ತಿ ಯಾವಾಗ?!

ಶಿವಮೊಗ್ಗ (shivamogga), ಅಕ್ಟೋಬರ್ 16: ಮುಂಗಾರು ಮಳೆಯ ವೇಳೆ, ಶಿವಮೊಗ್ಗ ನಗರ ಹಾಗೂ ತಾಲೂಕಿನ ವಿವಿಧೆಡೆಯ ರಸ್ತೆಗಳಲ್ಲಿ ಬಿದ್ದ ಗುಂಡಿ – ಗೊಟರುಗಳಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಅಪಘಾತಗಳು ಕೂಡ ಹೆಚ್ಚುತ್ತಿರುವ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರಲಾರಂಭಿಸಿದೆ.

ನಗರದ ಕೆಲ ಮುಖ್ಯ ರಸ್ತೆಗಳು ಮಾತ್ರವಲ್ಲದೆ, ಬಡಾವಣೆಗಳ ರಸ್ತೆಗಳಲ್ಲಿಯೂ ಭಾರೀ ದೊಡ್ಡ ಪ್ರಮಾಣದ ಗುಂಡಿ-ಗೊಟರುಗಳು ಬಿದ್ದಿವೆ. ಇದರಿಂದ ಸುಗಮ ವಾಹನ ಸಂಚಾರ ದುಸ್ತರವಾಗುತ್ತಿದೆ ಎಂದು ನಾಗರೀಕರು ಆರೋಪಿಸುತ್ತಾರೆ.

ಗುಂಡಿ – ಗೊಟರುಗಳು ದ್ವಿ ಚಕ್ರ ವಾಹನ ಸವಾರರ ಪಾಲಿಗೆ ಮಾರಣಾಂತಿಕವಾಗಿ ಪರಿಣಮಿಸುತ್ತಿವೆ. ರಾತ್ರಿ ವೇಳೆ ರಸ್ತೆ ಅವ್ಯವಸ್ಥೆ ಕಾರಣದಿಂದ ಅಪಘಾತಗಳು ಸಂಭವಿಸುವಂತಾಗಿದೆ. ಸವಾರರ ಅಹವಾಲು ಕೇಳುವವರೇ ಇಲ್ಲದಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರಸ್ತುತ ಮುಂಗಾರು ಮಳೆಯ ತೀವ್ರತೆ ಸಂಪೂರ್ಣ ಕಡಿಮೆಯಾಗಿದೆ. ಬಿಸಿಲು ಬೀಳಲಾರಂಭಿಸಿದೆ. ಆದಾಗ್ಯೂ ಹಲವು ರಸ್ತೆಗಳಲ್ಲಿನ ಅವ್ಯವಸ್ಥೆ ಮುಂದುವರಿದಿದೆ. ಇದು ಸಂಬಂಧಿಸಿದ ಇಲಾಖೆಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ವಾಹನ ಸವಾರರು ದೂರುತ್ತಾರೆ.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಅಧಿಕಾರಿಗಳ ಸಭೆ ನಡೆಸಿದ ವೇಳೆ, ಕಾಲಮಿತಿಯೊಳಗೆ ಜಿಲ್ಲೆಯಾದ್ಯಂತ ರಸ್ತೆಗಳ ಗುಂಡಿ – ಗೊಟರು ಮುಚ್ಚಲು ಕ್ರಮಕೈಗೊಳ್ಳಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ.

ತಕ್ಷಣವೇ ಪಿಡಬ್ಲ್ಯೂಡಿ, ರಾಷ್ಟ್ರೀಯ ಹೆದ್ದಾರಿ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯ್ತಿ ಪಂಚಾಯತ್ ರಾಜ್ ಇಲಾಖೆ ಆಡಳಿತಗಳು ಎಚ್ಚೆತ್ತುಕೊಳ್ಳಬೇಕು. ತಮ್ಮ ಅಧೀನದ ರಸ್ತೆಗಳ ಗುಂಡಿ – ಗೊಟರು ಮುಚ್ಚಲು ಕಾಲಮಿತಿಯೊಳಗೆ ಕ್ರಮಕೈಗೊಳ್ಳಬೇಕು. ಈ ಮೂಲಕ ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ನಾಗರೀಕರು ಆಗ್ರಹಿಸುತ್ತಾರೆ.  

ವೇಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ : ನಗರದ ಕೆಲ ಮುಖ್ಯ ರಸ್ತೆಗಳಲ್ಲಿ ಕೆಲ ವಾಹನ ಸವಾರರು ಮಿತಿಮೀರಿದ ವೇಗದಲ್ಲಿ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಇದರಿಂದ ಅಪಘಾತಗಳ ಪ್ರಮಾಣ ಕೂಡ ಹೆಚ್ಚಾಗುತ್ತಿದೆ.

ಈ ಕಾರಣದಿಂದ ವಾಹನಗಳ ವೇಗ ನಿಯಂತ್ರಣಕ್ಕೆ ವೈಜ್ಞಾನಿಕ ರೀತಿಯಲ್ಲಿ ಹಾಗೂ ಇಂಡಿಯನ್ ರೋಡ್ ಕಾಂಗ್ರೆಸ್ ನಿಯಮಗಳಿಗೆ ಅನುಗುಣವಾಗಿ ಹಂಪ್ಸ್ ಹಾಕುವುದು ಸೇರಿದಂತೆ ಇತರೆ ಕ್ರಮಗಳತ್ತ ಸಂಬಂಧಿಸಿದ ಇಲಾಖೆಗಳು ಗಮನಹರಿಸಬೇಕು ಎಂದು ಇದೆ ವೇಳೆ ನಾಗರೀಕರು ಆಗ್ರಹಿಸುತ್ತಾರೆ.

Shivamogga, October 16: During the monsoon, potholes and ditches on roads in various parts of Shivamogga city and taluk are causing severe disruption to vehicular traffic, and there have been complaints from the public that accidents are also on the rise.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →