
ಖಾಸಗಿ ಶಾಲೆ ಉನ್ನತಿಗಾಗಿ ವಿದ್ಯಾರ್ಥಿಯ ಕೊಲೆ : ಶಾಲಾ ಮಾಲೀಕ, ಶಿಕ್ಷಕರು ಸೇರಿ ಐವರ ಬಂಧನ – ವಾಮಾಚಾರಕ್ಕೆ ಬಲಿಯಾದ 2 ನೇ ತರಗತಿ ಬಾಲಕ!
ಹಥ್ರಾಸ್ (ಉತ್ತರ ಪ್ರದೇಶ) : ಶಾಲೆಯ ಉನ್ನತಿ, ಸಮೃದ್ಧಿಗಾಗಿ ವಿದ್ಯಾರ್ಥಿಯ ಕತ್ತು ಹಿಸುಕಿ ಕೊಲೆ ಮಾಡಿದ ಪೈಶಾಚಿಕ ಘಟನೆ, ಉತ್ತರ ಪ್ರದೇಶ ಹಥ್ರಾಸ್ ನಲ್ಲಿ ನಡೆದಿದೆ. ಈ ಸಂಬಂಧ ಖಾಸಗಿ ಶಾಲೆಯ ಮಾಲೀಕ, ನಿರ್ದೇಶಕ, ಪ್ರಾಂಶುಪಾಲ, ಶಿಕ್ಷಕರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಏನೀದು ಘಟನೆ?: ಡಿಎಲ್ ಪಬ್ಲಿಕ್ ಶಾಲೆಯ ಮಾಲೀಕ ಜಸೋಧನ್ ಸಿಂಗ್ ಎಂಬಾತ ವಾಮಾಚಾರ (black magic) ದಲ್ಲಿ ನಂಬಿಕೆ ಹೊಂದಿದ್ದ. ‘ಶಾಲೆಯ ಉನ್ನತಿ ಹಾಗೂ ಪರಿವಾರದ ಸಮೃದ್ಧಿಗೆ ಬಾಲಕನೋರ್ವನನ್ನು ನರಬಲಿ ನೀಡಬೇಕು’ ಎಂದು ತನ್ನ ಪುತ್ರ ಹಾಗೂ ಶಾಲೆಯ ನಿರ್ದೇಶಕನಾಗಿದ್ದ ದಿನೇಶ್ ಭಗೇಲ್ ಸಿಂಗ್ ಗೆ ಹೇಳಿದ್ದ.
ಸದರಿ ಶಾಲೆಯಲ್ಲಿ ಸುಮಾರು 600 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಶಾಲೆಯ ಆವರಣದಲ್ಲಿ ಹಾಸ್ಟೆಲ್ ಕೂಡ ಇತ್ತು. ಕಳೆದ ಸೆಪ್ಟೆಂಬರ್ 22 ರಂದು ನರಬಲಿ ನೀಡುವ ಉದ್ದೇಶದಿಂದ, ಹಾಸ್ಟೆಲ್ ನಲ್ಲಿ ತಂಗಿದ್ದ 2 ನೇ ತರಗತಿ ಅಭ್ಯಾಸ ಮಾಡುತ್ತಿದ್ದ 11 ವರ್ಷದ ವಿದ್ಯಾರ್ಥಿ ಕೃತಾರ್ಥ ಎಂಬಾತನನ್ನು ಶಾಲೆಯ ಹಾಸ್ಟೆಲ್ ನಿಂದ ಶಾಲೆಯ ಶಿಕ್ಷಕ ರಾಮಪ್ರಕಾಶ್ ಸೋಲಂಕಿ, ದಿನೇಶ್ ಭಗೇಲ್ ಮತ್ತು ಜಸೋಧನ್ ಸಿಂಗ್ ಅಪಹರಿಸಿದ್ದರು.
ನಿಗದಿತ ಸ್ಥಳಕ್ಕೆ ಕರೆದೊಯ್ದ ವೇಳೆ, ವಿದ್ಯಾರ್ಥಿ ಎಚ್ಚರಗೊಂಡು ಅಳಲು ಆರಂಭಿಸಿದ್ದಾನೆ. ಈ ವೇಳೆ ಆರೋಪಿಗಳು ಬಾಲಕನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು. ನಂತರ ಪೋಷಕರಿಗೆ ಕರೆ ಮಾಡಿ, ಬಾಲಕನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ತಿಳಿಸಿದ್ದರು.
ಮತ್ತೊಂದೆಡೆ, ವಿದ್ಯಾರ್ಥಿಯ ತಂದೆಯು ಆರೋಪಿಗಳಿದ್ದ ಕಾರನ್ನು ಪತ್ತೆ ಹಚ್ಚಿದ್ದರು. ಕಾರಿನಲ್ಲಿ ಪುತ್ರನ ಶವವನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವೈದ್ಯಕೀಯ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಪ್ರಕರಣ ಸಂಬಂಧ ಶಾಲೆಯ ಮಾಲೀಕ ಜಸೋಧನ್ ಸಿಂಗ್, ನಿರ್ದೇಶಕ ದಿನೇಶ್ ಭಗೇಲ್, ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್, ಶಿಕ್ಷಕರಾದ ರಾಮ್ ಪ್ರಕಾಶ್ ಸೋಲಂಕಿ ಮತ್ತು ವೀರ ಪಾಲ್ ಸಿಂಗ್ ರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬೆನ್ನಲ್ಲೇ, ಶಿಕ್ಷಣ ಇಲಾಖೆಯು ಶಾಲೆಯನ್ನು ಬಂದ್ ಮಾಡಿದೆ.
A satanic incident where a student was strangled to death for the upliftment and prosperity of the school took place in Hathras, Uttar Pradesh. The police have arrested five people including the owner, director, principal and teacher of the private school in this connection.