
shimoga | ಶಿವಮೊಗ್ಗ ಮಹಾನಗರ ಪಾಲಿಕೆ ಆಶ್ರಯ ವಿಭಾಗದ ಅಧಿಕಾರಿ ಲೋಕಾಯುಕ್ತ ಬಲೆಗೆ!
ಶಿವಮೊಗ್ಗ (shivamogga), ಆಗಸ್ಟ್ 29: ಆಶ್ರಯ ಮನೆಯ ಖಾತೆ ಮಾಡಿಕೊಡಲು ಸಾರ್ವಜನಿಕರೋರ್ವರಿಂದ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ಆರೋಪದ ಮೇರೆಗೆ, ಶಿವಮೊಗ್ಗ ಮಹಾನಗರ ಪಾಲಿಕೆ ಆಶ್ರಯ ವಿಭಾಗದ ಸಮುದಾಯ ಅಧಿಕಾರಿಯೋರ್ವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದ ಘಟನೆ, ನಗರದ ನೆಹರು ರಸ್ತೆಯ ಪಾಲಿಕೆ ಆಶ್ರಯ ವಿಭಾಗದ ಕಚೇರಿಯಲ್ಲಿ ಆಗಸ್ಟ್ 29 ರ ಸಂಜೆ ನಡೆದಿದೆ.
ಶಶಿಧರ್ (57) ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಎಂದು ಗುರುತಿಸಲಾಗಿದೆ. ಲಂಚದ ಹಣದ ಸಮೇತ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ದ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ, ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ : ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿವಾಸಿಯಾದ ದೂರುದಾರ ಮೊಹಮ್ಮದ್ ಆಸೀಫ್ ಉಲ್ಲಾ ಎಂಬುವರು, ಆಶ್ರಯ ಬಡಾವಣೆಯಲ್ಲಿ ಮನೆಯೊಂದನ್ನು ಖರೀದಿಸಿದ್ದರು. ಇದನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಳ್ಳುವ ಸಂಬಂಧ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು.
ಖಾತೆ ಮಾಡಿಕೊಡಲು 10 ಸಾವಿರ ರೂ. ನೀಡುವಂತೆ ಅಧಿಕಾರಿ ಶಶಿಧರ್ ರವರು, ದೂರುದಾರರಿಗೆ ಡಿಮ್ಯಾಂಡ್ ಮಾಡಿದ್ದರು. ಲಂಚ ನೀಡಲು ಇಷ್ಟವಿಲ್ಲದ ದೂರುದಾರರು, ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಸಂಜೆ ನೆಹರು ರಸ್ತೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ವಾಣಿಜ್ಯ ಸಂಕೀರ್ಣದಲ್ಲಿರುವ ಪಾಲಿಕೆ ಆಶ್ರಯ ಕಚೇರಿಯಲ್ಲಿ, ದೂರುದಾರರು ಶಶಿಧರ್ ಅವರಿಗೆ 10 ಸಾವಿರ ರೂ. ಲಂಚ ನೀಡುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಲಂಚದ ಹಣದ ಸಮೇತ ಅಧಿಕಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
shivamogga, august 29: The incident took place on the evening of August 29 when the Lokayukta police detained a community officer of the asharya department of the Shivamogga Municipal Corporation on charges of accepting a bribe of Rs. 10,000.