ಶಿವಮೊಗ್ಗ (shivamogga), ಡಿ. 1: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಚಂಡಮಾರುತ ಸೃಷ್ಟಿಯಾಗಿದೆ. ಇದಕ್ಕೆ ಫೆಂಗಲ್ ಎಂದು ಹೆಸರಿಡಲಾಗಿದೆ. ಫೆಂಗಲ್ ಚಂಡಮಾರುತದಿಂದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮೊದಲಾದೆಡೆ ವ್ಯಾಪಕ ಮಳೆಯಾಗುತ್ತಿದೆ.
ಈ ನಡುವೆ ಕರ್ನಾಟಕದ ವಿವಿಧೆಡೆ ಮಳೆಯಾಗಲಾರಂಭಿಸಿದೆ. ಮತ್ತೊಂದೆಡೆ ಹವಾಮಾನ ಇಲಾಖೆಯು ಭಾನುವಾರದಿಂದ ಮುಂದಿನ ಮೂರ್ನಾಲ್ಕು ದಿನಗಳ ಕಾಲ, ರಾಜ್ಯದ ವಿವಿಧೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಶಿವಮೊಗ್ಗ ಜಿಲ್ಲೆಯಲ್ಲಿಯೂ ಫೆಂಗಲ್ ಎಫೆಕ್ಟ್ ಕಂಡುಬಂದಿದೆ. ಭಾನುವಾರ ಜಿಲ್ಲೆಯ ಹಲವೆಡೆ ದಟ್ಟ ಮೋಡ ಕವಿದ ವಾತಾವರಣ ನೆಲೆಸಿದೆ. ಮಳೆಯಾಗುವ ಸಾಧ್ಯತೆ ಗೋಚರವಾಗುತ್ತಿದೆ. ಇದು ರೈತರ ನಿದ್ದೆಗೆಡುವಂತೆ ಮಾಡಿದೆ.
ಸದ್ಯ ಜಿಲ್ಲೆಯಾದ್ಯಂತ ಭತ್ತ, ರಾಗಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಕಟಾವು ಕಾರ್ಯ ಬಿರುಸುಗೊಂಡಿದೆ. ಈ ನಡುವೆ ಚಂಡಮಾರುತ ಪರಿಣಾಮದಿಂದ ಮಳೆ ವಾತಾವರಣ ಮನೆ ಮಾಡಿರುವುದು ರೈತರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.
ಪ್ರಸ್ತುತ ವರ್ಷದ ಮುಂಗಾರು ಹಂಗಾಮಿನ ವೇಳೆ ಬಿದ್ದ ಭಾರೀ ಮಳೆಯಿಂದ ಬೆಳೆಗೆ ಹಾನಿಯಾಗಿತ್ತು. ಇದೀಗ ಹಸನು ಕಾರ್ಯದ ವೇಳೆ ಮಳೆ ವಾತಾವರಣ ಉಂಟಾಗಿರುವುದರಿಂದ ಮತ್ತೆ ಬೆಳೆ ನಷ್ಟದ ಭೀತಿ ಉಂಟು ಮಾಡಿದೆ ಎಂದು ರೈತರು ಹೇಳುತ್ತಾರೆ.
Cyclone is formed by depression in Bay of Bengal. It is named Fungal. Fungal cyclone is causing widespread rains in Tamil Nadu, Kerala, Andhra Pradesh etc.

