bhadravati | ಭದ್ರಾವತಿ : ಬೈಕ್ ಕಳ್ಳನ ಜೊತೆಗೆ ಗುಜರಿ ವ್ಯಾಪಾರಿ ಅರೆಸ್ಟ್..!
ಭದ್ರಾವತಿ (bhadravathi), ಡಿ. 1: ಬೈಕ್ ಕಳವು ಮಾಡುತ್ತಿದ್ದವ ಹಾಗೂ ಈತನಿಂದ ಕಳವು ಮಾಡಿದ ಬೈಕ್ ಖರೀದಿಸುತ್ತಿದ್ದ ಗುಜರಿ ವ್ಯಾಪಾರಿಯನ್ನು, ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಚಿಕ್ಕಮಗಳೂರು ನಗರದ ಸುಗ್ಗೀಹಳ್ಳಿ ಸಮೀಪದ ಕೋಟೆ ಅಗ್ರಹಾರ ಸರ್ಕಲ್ ನಿವಾಸಿಯಾದ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ನವೀನ್ ಕುಮಾರ್ ಎಂ ಬಿ (32) ಹಾಗೂ ಭದ್ರಾವತಿ ವೀರಾಪುರ ಗ್ರಾಮದ ಬಸ್ ಸ್ಟ್ರ್ಯಾಂಡ್ ಸಮೀಪದ ಗುಜರಿ ವ್ಯಾಪಾರಿ ಉಮ್ಮರ್ ಬೇಗ್ (26) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಬಂಧಿತರಿಂದ 55 ಸಾವಿರ ರೂ. ಮೌಲ್ಯದ 3 ಬೈಕ್, 7 ದ್ವಿಚಕ್ರ ವಾಹನಗಳ ಬಿಡಿಭಾಗಗಳ ಮಾರಾಟದಿಂದ ಗಳಿಸಿದ್ದ 2.10 ಲಕ್ಷ ನಗದು, ಕೃತ್ಯಕ್ಕೆ ಬಳಸಿದ ಸುಮಾರು 60 ಸಾವಿರ ರೂ. ಮೌಲ್ಯದ ಪಲ್ಸರ್ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಭದ್ರಾವತಿ ಡಿವೈಎಸ್ಪಿ ನಾಗರಾಜ್ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಶ್ರೀಶೈಲಕುಮಾರ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ರಮೇಶ್, ಎಎಸ್ಐ ಮಂಜಪ್ಪ, ಸಿಬ್ಬಂದಿಗಳಾದ ನವೀನ, ಪ್ರಸನ್ನ, ರಘು ಬಿ ಎಂ ರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಪತ್ತೆಯಾಗಿದ್ದು ಹೇಗೆ? : 4-6-2024 ರಂದು ಭದ್ರಾವತಿ ಬಿಳಕಿ ಕ್ರಾಸ್ ಸಮೀಪದ ರೆಸ್ಟೋರೆಂಟ್ ವೊಂದರ ಬಳಿ, ಲಾಕ್ ಮಾಡಿ ನಿಲ್ಲಿಸಿದ್ದ ಅಂತರಗಂಗೆ ಗ್ರಾಮದ ನಿವಾಸಿ ಷಣ್ಮುಖಪ್ಪ ಎಂಬುವರಿಗೆ ಸೇರಿದ ಬಜಾಜ್ ಪ್ಲಾಟಿನ ಬೈಕ್ ನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಅವರು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಸದರಿ ತಂಡವು 28-11-2024 ರಂದು ಆರೋಪಿಗಳನ್ನು ವಶಕ್ಕೆ ಪಡೆದಿತ್ತು. ವಿಚಾರಣೆ ವೇಳೆ ಆರೋಪಿ ನವೀನನು ಭದ್ರಾವತಿ ಪಟ್ಟಣದ ವಿವಿಧೆಡೆ 10 ಬೈಕ್ ಕಳವು ಮಾಡಿದ್ದು ಬೆಳಕಿಗೆ ಬಂದಿತ್ತು.
ಇದರಲ್ಲಿ 7 ಬೈಕ್ ಗಳನ್ನು ಆರೋಪಿಯು ಗುಜರಿ ವ್ಯಾಪಾರಿಯಾದ ಉಮ್ಮರ್ ಬೇಗ್ ಗೆ, ಮಾರಾಟ ಮಾಡಿದ್ದ ಸಂಗತಿ ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿತ್ತು.
An accused who was stealing a bike and a Gujri trader who was buying the stolen bike from him were arrested by Bhadravati New Town police station.
