ಶಿವಮೊಗ್ಗ, ಎ. 6: ಶಿವಮೊಗ್ಗ ನಗರದ ಹೊರವಲಯ ರಾಗಿಗುಡ್ಡದಲ್ಲಿ ಗುರುವಾರ ಸಂಜೆ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಶಾಂತಿನಗರ ಭಾಗದ ಗುಡ್ಡದ ಭಾಗದಲ್ಲಿ ಸಂಜೆ ದಿಢೀರ್ ಆಗಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದರು.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಎರಡು ವಾಹನಗಳು ಗುಡ್ಡಕ್ಕೆ ತುಗಲಿದ್ದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಗುಡ್ಡದ ಇತರೆಡೆ ಅಗ್ನಿಯ ಕೆನ್ನಾಲಿಗೆ ವ್ಯಾಪಿಸುವುದನ್ನು ನಿಯಂತ್ರಿಸಿದೆ.
ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆಂಬುವುದು ಸ್ಪಷ್ಟವಾಗಿಲ್ಲ. ತೀವ್ರ ಸ್ವರೂಪದ ಬಿಸಿಲಿನಿಂದ ಗುಡ್ಡದಲ್ಲಿ ಕುರುಚಲು ಗಿಡಗಂಟೆಗಳು, ಹಸಿರು ಹುಲ್ಲು ಒಣಗಿದೆ. ಪ್ರಸ್ತುತ ಬೇಸಿಗೆ ವೇಳೆ ಕಾಳ್ಗಿಚ್ಚಿನಿಂದ ರಾಗಿಗುಡ್ಡ ಉಳಿಸುವ ನಿಟ್ಟಿನಲ್ಲಿ, ಆಡಳಿತ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ ಏಕೈಕ ಗುಡ್ಡ ರಾಗಿಗುಡ್ಡವಾಗಿದೆ. ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನವಾಗಿದೆ. ಆದರೆ ವಿವಿಧ ಅಭಿವೃದ್ದಿ ಕಾಮಗಾರಿ, ಕಟ್ಟಡಗಳ ನಿರ್ಮಾಣದಿಂದ ಗುಡ್ಡ ಕಣ್ಮರೆಯಾಗುತ್ತಿದೆ. ಇದೀಗ ಕಾಳ್ಗಿಚ್ಚಿನಿಂದ ಅಳಿದುಳಿದ ಪ್ರಕೃತಿ ಸಂಪತ್ತು ವಿನಾಶವಾಗಲಾರಂಭಿಸಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

