shimoga news | ಮಹತ್ತರ ಸೇವೆಯ ಮೂಲಕ ಗಮನ ಸೆಳೆದಿದ್ದ ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಮಂಜುನಾಥ ನಾಯಕ್ ವರ್ಗಾವಣೆ
ಶಿವಮೊಗ್ಗ (shivamogga), ಅಕ್ಟೋಬರ್ 2: ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ನಾಯಕ್ ಅವರನ್ನು, ಬೆಳಗಾವಿ ಜಿಲ್ಲೆಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರನ್ನಾಗಿ ವರ್ಗಾವಣೆಗೊಳಿಸಿ, ಉಚ್ಚ ನ್ಯಾಯಾಲಯವು 30.10.2025 ರಂದು ಆದೇಶ ಹೊರಡಿಸಿದೆ.
ಉಚ್ಛ ನ್ಯಾಯಾಲಯದಲ್ಲಿ ನೇಮಕಾತಿ ಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದ ನ್ಯಾ. ಮಂಜುನಾಥ್ ನಾಯಕ್ ರವರನ್ನು, ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರ ಹುದ್ದೆಗೆ ವರ್ಗಾವಣೆಗೊಳಿಸಲಾಗಿತ್ತು. 2023 ರ ಜೂನ್ ತಿಂಗಳಲ್ಲಿ ಪದಗ್ರಹಣ ಮಾಡಿದ್ದರು. 03.11.2025 ರಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರ ಪದದಿಂದ ಮುಕ್ತಗೊಂಡು, 05.11.2025 ರಂದು ಬೆಳಗಾವಿಗೆ ತೆರಳಿ ಅಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರ ಪದಗ್ರಹಣ ಮಾಡಲಿದ್ದಾರೆ.
ಮಹತ್ತರ ಸಾಧನೆ : ನ್ಯಾ. ಮಂಜುನಾಥ್ ನಾಯಕ್ ಅವರು ತಮ್ಮ ಸೇವಾವಧಿಯಲ್ಲಿ ಒಟ್ಟು 10 ರಾಷ್ಟ್ರೀಯ ಲೋಕ ಅದಾಲತ್ ಗಳನ್ನು ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಆಯೋಜಿಸಿದ್ದರು. ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿ ಬಾಕಿಯಿದ್ದ ಒಟ್ಟು 1,21,499 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡಲು ನ್ಯಾಯಾಧೀಶರಿಗೆ, ನ್ಯಾಯಾಂಗ ಇಲಾಖೆ ಸಿಬ್ಬಂದಿ ವರ್ಗದವರಿಗೆ ಹಾಗೂ ನ್ಯಾಯವಾದಿಗಳಿಗೆ ಮತ್ತು ಪಕ್ಷಗಾರರಿಗೆ ಮಾರ್ಗದರ್ಶನ ನೀಡಿ ಬಹು ಮುಖ್ಯವಾದ ಪಾತ್ರ ನಿರ್ವಹಿಸಿದ್ದಾರೆ.
ತಮ್ಮ ಸೇವಾ ಅವಧಿಯಲ್ಲಿ ವಿವಿಧ ಹುದ್ದೆಗಳಿಗೆ 50 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನೇಮಕಾತಿ ಮಾಡಿರುತ್ತಾರ. ಹಾಗೂ ಸೇವೆಯಲ್ಲಿದ್ದ 54 ಸಿಬ್ಬಂದಿಗಳ ಸೇವೆ ಪರಿಶೀಲಿಸಿ ಅವರಿಗೆ ಮುಂಬಡ್ತಿ ನೀಡಿರುತ್ತಾರೆ. ಅಲ್ಲದೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ 69 ಸಿಬ್ಬಂದಿಗಳು ತೃಪ್ತಿಕರವಾಗಿ ಪ್ರೊಬೇಷನ್ ಅವಧಿಯನ್ನು ಪೂರ್ಣಗೊಳಿಸಿರುತ್ತಾರೆ ಎಂದು ಆದೇಶ ಹೊರಡಿಸಿ, ಅಂತಹ ಸಿಬ್ಬಂದಿಗಳನ್ನು ಸಾರ್ವಜನಿಕ ಸೇವೆಯಲ್ಲಿ ಖಾಯಂಗೊಳಿಸಿ ಆದೇಶಿಸುತ್ತಾರೆ.
ಪ್ರಮುಖವಾಗಿ ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ, ಗೌರವಾನ್ವಿತರು ಪದಗ್ರಹಣ ಮಾಡಿದ ದಿನದಿಂದ ಈ ದಿನದವರೆಗೂ ಹಲವಾರು ಪ್ರಮುಖ ಪ್ರಕರಣಗಳಲ್ಲಿ ತೀರ್ಪು ನೀಡಿ ಉಚ್ಚ ನ್ಯಾಯಾಲಯ ನಿಗದಿಪಡಿಸಿದ ನಿಯಮಕ್ಕಿಂತ ಮೂರು ಪಟ್ಟು ಅಧಿಕ ಪ್ರಕರಣಗಳಲ್ಲಿ ಆದೇಶ ನೀಡುವುದರ ಮೂಲಕ ವಿಲೇಗೊಳಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರಾಧಿಕಾರದ ವಿವಿಧ ಕಾನೂನು ಅರಿವು ಕಾರ್ಯಕ್ರಮಗಳು ಹಾಗೂ ಅಭಿಯಾನಗಳಲ್ಲಿ ಅನೇಕ ಸರಕಾರಿ ಇಲಾಖೆಗಳಿಗೆ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಸಹಕಾರ ನೀಡುವ ಮೂಲಕ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಮಾನ್ಯ ಜನರಿಗೆ ಕಾನೂನು ಅರಿವನ್ನು ನೀಡುವಲ್ಲಿ ಹಾಗೂ ಅರ್ಹ ವ್ಯಕ್ತಿಗಳಿಗೆ ಕಾನೂನು ನೆರವನ್ನು ನೀಡುವಲ್ಲಿ ಮತ್ತು ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ವಿಚಾರಣಾ ಹಂತದ ವಿವಿಧ ಸ್ವರೂಪದ ಪ್ರಕರಣಗಳು ಅಂತಿಮವಾಗಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸುವಲ್ಲಿ ಅತ್ಯುನ್ನತ ಸೇವೆಯನ್ನು ಸಲ್ಲಿಸಿರುತ್ತಾರೆ.
ಗೌರವಾನ್ವಿತರ ಶ್ರೇಷ್ಠ ಸೇವೆ ಅತಿ ಹೆಚ್ಚು ಸಾರ್ವಜನಿಕರಿಗೆ ಲಭಿಸಲಿ ಮತ್ತು ಅವರು ವರ್ಗಾವಣೆಗೊಂಡು ತೆರಳುತ್ತಿರುವ ಸ್ಥಳದಲ್ಲಿ ಇನ್ನು ಹೆಚ್ಚಿನ ಸೇವಾ ಅವಕಾಶ ಲಭಿಸಲಿ ಎಂದು ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ನ್ಯಾಯವಾದಿಗಳು, ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಿಬ್ಬಂದಿ ವರ್ಗದವರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳನ್ನೊಳಗೊಂಡಂತೆ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
shivamogga, november 2: Manjunath Nayak, who was serving as the Principal District and Sessions Judge of Shivamogga district and Chairman of the District Legal Services Authority, has been transferred as the Principal District and Sessions Judge of Belgaum district.
