ಸೊರಬ (soraba), ಡಿಸೆಂಬರ್ 24: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಕೆರೆಗೆ ಪಲ್ಟಿಯಾಗಿ ಬಿದ್ದ ಪರಿಣಾಮ ಓರ್ವರು ಮೃತಪಟ್ಟು, ಮತ್ತೋರ್ವರು ಕಣ್ಮರೆಯಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ, ಸೊರಬ ತಾಲೂಕಿನ ಆನವಟ್ಟಿ ಸಮೀಪದ ಕನೆಕೊಪ್ಪ ಹೊಸೂರು ಬಳಿ ಡಿಸೆಂಬರ್ 24 ರ ಮುಂಜಾನೆ ನಡೆದಿದೆ.
ಶಿಕಾರಿಪುರ ತಾಲೂಕಿನ ಪುನೇದಹಳ್ಳಿ ನಿವಾಸಿ ನವೀನ್ (21) ಮೃತಪಟ್ಟವರೆಂದು ಗುರುತಿಸಲಾಗಿದೆ. ರಾಮಚಂದ್ರ (37) ಎಂಬುವರು ನಾಪತ್ತೆಯಾಗಿದ್ದಾರೆ. ಇವರಿಗಾಗಿ ಶೋಧ ನಡೆಸಲಾಗುತ್ತಿದೆ. ರುದ್ರೇಶ್ (26) ಹಾಗೂ ಮಂಜುನಾಥ್ (21) ಎಂಬಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಗಿನ ಜಾವ 3.20 ರ ಸುಮಾರಿಗೆ ಶಿಕಾರಿಪುರದಿಂದ ಆನವಟ್ಟಿ ಕಡೆಗೆ ಇಕೋ ಕಾರಿನಲ್ಲಿ ನಾಲ್ವರು ಪ್ರಯಾಣಿಸಿದ್ದಾರೆ. ಕನೆಕೊಪ್ಪ ಹೊಸೂರು ರಸ್ತೆ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕೆರೆಗೆ ಉರುಳಿ ಬಿದ್ದಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಆನವಟ್ಟಿ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
One person has died and another is missing after a car overturned into a lake after the driver lost control. The incident, in which two people narrowly escaped death, took place on the morning of December 24 near Kanekoppa Hosur, near Anavatti in Sorab taluk.

