ಶಿವಮೊಗ್ಗ (shivamogga), ಆ. 24: ಕಾಡಾನೆ ದಾಳಿಯಿಂದ (wild elephant attack), ಕೃಷಿ ಕೂಲಿಕಾರ್ಮಿಕರೋರ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ, ಆ. 24 ರ ಶನಿವಾರ ರಾತ್ರಿ ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲದೇವರ ಹೊಸೂರು (aladevara hosur) ಗ್ರಾಮದಲ್ಲಿ ನಡೆದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮೂಲದ ನಿವಾಸಿ ಹನುಮಂತಪ್ಪ (45) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಹನುಮಂತಪ್ಪ ಅವರು ಕೆಲಸ ಮಾಡುತ್ತಿದ್ದ ತೋಟದ ಬಳಿ ಬರುತ್ತಿದ್ದ ವೇಳೆ, ಏಕಾಏಕಿ ಕಾಡಾನೆ (elephant) ದಾಳಿ ನಡೆಸಿದೆ.
ಗಂಭೀರವಾಗಿ ಗಾಯಗೊಂಡ ಹನುಮಂತಪ್ಪ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ (forest dept) ಅಧಿಕಾರಿ – ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಹನುಮಂತಪ್ಪ ಅವರು ಕಳೆದ ಹಲವು ವರ್ಷಗಳಿಂದ ಶ್ರೀಧರ್ ಎಂಬುವರ ತೋಟದಲ್ಲಿ ಕೂಲಿಕಾರ್ಮಿಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ತೋಟದಲ್ಲಿನ ಮನೆಯಲ್ಲಿಯೇ ಪತ್ನಿ, ಮೂರು ಮಕ್ಕಳೊಂದಿಗೆ ನೆಲೆಸಿದ್ದರು ಎಂದು ಸ್ಥಳೀಯ ರೈತರು ಮಾಹಿತಿ ನೀಡಿದ್ದಾರೆ.
ಹನುಮಂತಪ್ಪ ಅವರು ಅತ್ಯಂತ ಕಡುಬಡವರಾಗಿದ್ದಾರೆ. ಅವರ ಸಾವಿನಿಂದ ಇಡೀ ಕುಟುಂಬ ಬೀದಿ ಪಾಲಾಗುವಂತಾಗಿದೆ. ಮೃತನ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.

