ಶಿವಮೊಗ್ಗ (shimoga), ಸೆ. 16: ಶಿವಮೊಗ್ಗ ನಗರದ ಭೀಮೇಶ್ವರ ದೇವಾಲಯ ಆವರಣದಲ್ಲಿ ಹಿಂದೂ ಮಹಾಮಂಡಲದಿಂದ ಪ್ರತಿಷ್ಠಾಪಿಸಿರುವ, ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ (hindu mahasabha ganapati procession), ಸೆ. 17 ರ ಮಂಗಳವಾರದಂದು ನಡೆಯಲಿದೆ.
ಮೆರವಣಿಗೆ ಹಾದು ಹೋಗಲಿರುವ ಮಾರ್ಗಗಳು ಸಂಪೂರ್ಣ ಕೇಸರಿಮಯವಾಗಿ ಪರಿವರ್ತಿತವಾಗಿದೆ. ಕೇಸರಿ ಬಂಟಿಂಗ್, ಧ್ವಜಗಳು ಎಲ್ಲೆಡೆ ರಾರಾಜಿಸುತ್ತಿವೆ. ಹಾಗೆಯೇ ಪ್ರಮುಖ ಸ್ಥಳಗಳಲ್ಲಿ ಆಕರ್ಷಕ ಅಲಂಕಾರ ಮಾಡಲಾಗಿದೆ.
ಗಾಂಧಿ ಬಜಾರ್ ರಸ್ತೆ (gandhi bazar road) ಪ್ರವೇಶ ದ್ವಾರದಲ್ಲಿ ಕಾಶಿ ವಿಶ್ವನಾಥ ಮಂದಿರದ ಅಲಂಕಾರ, ಎ ಎ ವೃತ್ತದಲ್ಲಿ ರಾಮಮಂದಿರ ದೇವಾಲಯದ ಮತ್ತು ಶ್ರೀರಾಮ – ಆಂಜನೇಯನ ಅಲಂಕಾರ, ದೈವಜ್ಞ ವೃತ್ತದಲ್ಲಿ ಗರುಡನ ಅಲಂಕಾರ, ಎಂಆರ್’ಎಸ್ ವೃತ್ತದಲ್ಲಿ ಶಿವಾಜಿ ಮಹಾರಾಜರ ಅಲಂಕಾರಗಳು ಗಮನ ಸೆಳೆಯುತ್ತಿವೆ.
ಬೆಳಿಗ್ಗೆ ಸರಿಸುಮಾರು 9.30 ಕ್ಕೆ ಗಣಪತಿಯ ರಾಜಬೀದಿ ಉತ್ತವಕ್ಕೆ ಚಾಲನೆ ದೊರಕಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗುತ್ತಿವೆ. ಹಾಗೆಯೇ ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ವಿವಿಧ ಸಂಘಸಂಸ್ಥೆಗಳು ಕುಡಿಯುವ ನೀರು, ಪಾನಕ, ಮಜ್ಜಿಗೆ ಸೇರಿದಂತೆ ಲಘು ಉಪಹಾರದ ವ್ಯವಸ್ಥೆಗಳನ್ನು ಮಾಡಿವೆ.

