
ಹೊಳೆಹೊನ್ನೂರು ಪೊಲೀಸರ ಕಾರ್ಯಾಚರಣೆ : ಭದ್ರಾವತಿ, ಶಿವಮೊಗ್ಗ, ದಾವಣಗೆರೆಯ ಮೂವರು ಆರೋಪಿಗಳ ಸೆರೆ!
ಭದ್ರಾವತಿ (bhadravati), ಜ. 17: ಅಡಕೆ ಹಾಗೂ ವಾಹನ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಭದ್ರಾವತಿ, ಶಿವಮೊಗ್ಗ ಹಾಗೂ ದಾವಣಗೆರೆಯ ಮೂವರು ಆರೋಪಿಗಳನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಕಳವು ಮಾಲು ವಶಕ್ಕೆ ಪಡೆದಿದ್ದಾರೆ.
ಭದ್ರಾವತಿ ಪಟ್ಟಣದ ಖಾಜಿ ಮೊಹಲ್ಲಾ ನಿವಾಸಿ ಪಾಲಿಶ್ ಕೆಲಸ ಮಾಡುವ ಸಾಜಿದ್ ಯಾನೆ ಸಾದಿಕ್ (25), ಶಿವಮೊಗ್ಗ ತಾಲೂಕು ಕೂಡ್ಲಿ ನಿವಾಸಿಯಾದ ಫ್ಲೈವುಡ್ ಕೆಲಸ ಮಾಡುವ ಜಮೀರ್ ಶೇಖ್ ಯಾನೆ ಅಡ್ಡು (24) ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿ ನಿವಾಸಿ ಪಾಲಿಶ್ ಕೆಲಸ ಮಾಡುವ ಮಹಮದ್ ಮುಹೀಬುಲ್ಲಾ (23) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳ ಬಂಧನದಿಂದ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2023 ನೇ ಸಾಲಿನಲ್ಲಿ ನಡೆದಿದ್ದ ಬೈಕ್ ಕಳವು, 2024 ನೇ ಸಾಲಿನಲ್ಲಿ ನಡೆದಿದ್ದ ಎರಡು ವಾಹನ ಕಳವು ಹಾಗೂ ಅಡಕೆ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಜ. 16 ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಒಟ್ಟಾರೆ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ 3 ಲಕ್ಷ ರೂ. ಮೌಲ್ಯದ 6 ಕ್ವಿಂಟಾಲ್ ಅಡಕೆ, 1. 93 ಲಕ್ಷ ರೂ. ಮೌಲ್ಯದ ಮೂರು ದ್ವಿಚಕ್ರ ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಓಮ್ನಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟಾರೆ ಇವುಗಳ ಮೌಲ್ಯ 6. 93 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಭದ್ರಾವತಿ ಡಿವೈಎಸ್ಪಿ ನಾಗರಾಜ್ ಕೆ ಆರ್ ಅವರ ಮೇಲ್ವಿಚಾರಣೆಯಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಲಕ್ಷ್ಮೀಪತಿ ಆರ್ ಎಲ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ರಮೇಶ್, ಮಂಜುನಾಥ್ ಎಸ್ ಕುರಿ, ಕೃಷ್ಣನಾಯ್ಕ್ ಹಾಗೂ ಹೆಚ್ ಸಿ ಗಳಾದ ಅಣ್ಣಪ್ಪ, ಪ್ರಕಾಶ್ ನಾಯ್ಕ್, ಮಂಜುನಾಥ್, ಪ್ರಸನ್ನ, ಪಿಸಿಗಳಾದ ವಿಶ್ವನಾಥ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಹೊಳೆಹೊನ್ನೂರು ಠಾಣೆ ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಯನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು ಅಭಿನಂದಿಸಿದ್ದಾರೆ.
Holehonur station police have arrested three accused from Bhadravati, Shimoga and Davanagere who were involved in arecanut and vehicle theft. Lakhs of Rs. Stolen goods of value have been seized.