ಶಿವಮೊಗ್ಗ (shivmogga), ಆ. 15: ಸ್ವಾತಂತ್ರ್ಯ ದಿನಾಚರಣೆ (independence day) ಅಂಗವಾಗಿ, ಕ್ಯಾನ್ಸರ್ ಪೀಡಿತ ಬಾಲಕಿಯ ಚಿಕಿತ್ಸೆಗೆ ದೇಣಿಗೆ ನೀಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಆದಿ ಜಾಂಬವ ರಾಜ್ಯ ಸಮಿತಿಯು, ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಿಸಿ ಗಮನ ಸೆಳೆದಿದೆ.
‘ಶಿವಮೊಗ್ಗ (shimoga) ನಗರದ ದುರ್ಗಿಗುಡಿ ಕಚೇರಿಯಲ್ಲಿ ಆ. 15 ರಂದು ನಡೆದ ಸಮಾರಂಭದಲ್ಲಿ, ಹಿರಿಯೂರಿನ ದಲಿತ ಗುರುಪೀಠದ ಗುರುಪ್ರಕಾಶ್ ಸ್ವಾಮೀಜಿಯವರ ಮೂಲಕ, ಬಾಲಕಿಯ ಕುಟುಂಬದವರಿಗೆ ಚೆಕ್ ಹಸ್ತಾಂತರ ಮಾಡಲಾಯಿತು’ ಎಂದು ಸಮಿತಿಯ ರಾಜ್ಯಾಧ್ಯಕ್ಷರಾದ ಎನ್. ಪ್ರಕಾಶ್ ಅವರು ಮಾಹಿತಿ ನೀಡಿದ್ದಾರೆ.
ಶಿವಮೊಗ್ಬ ಬೊಮ್ಮನಕಟ್ಟೆ ಬಡಾವಣೆಯ ಬಡ ಕುಟುಂಬದ ಬಾಲಕಿಯು ಕ್ಯಾನ್ಸರ್ ಗೆ ತುತ್ತಾಗಿದ್ದು, ಸದ್ಯ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಂತಹಂತವಾಗಿ ಸಮಿತಿಯಿಂದ ಬಾಲಕಿಯ ಕುಟುಂಬಕ್ಕೆ ನೆರವಿನಹಸ್ತ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಬಾಲಕಿಯ ಕುಟುಂಬಕ್ಕೆ ನೆರವಿನಹಸ್ತ ಕಲ್ಪಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಸಮಿತಿಯವತಿಯಿಂದ ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ಎನ್. ಪ್ರಕಾಶ್ ಅವರು ಹೇಳಿದ್ದಾರೆ.
ಸಮಾರಂಭದಲ್ಲಿ ಪತ್ರಕರ್ತ ಚನ್ನಬಸಪ್ಪ, ಸಮಿತಿಯ ಗೌರವಾಧ್ಯಕ್ಷರಾದ ದೇವೇಂದ್ರಪ್ಪ, ಜಿಲ್ಲಾಧ್ಯಕ್ಷರಾದ ಕರಿಬಸಪ್ಪ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಕೆಂಚಮ್ಮ ರಮೇಶ್, ಪ್ರಮುಖರಾದ ಹಾರನಹಳ್ಳಿ ಹಳದಪ್ಪ, ಪ್ರತಾಪ್, ಕಲ್ಲಪ್ಪ ಸೇರಿದಂತೆ ಮೊದಲಾದವರಿದ್ದರು.

