ಶಿವಮೊಗ್ಗ (shivamogga), ಆ. 28: ಶಿವಮೊಗ್ಗ ನಗರದ ಹೊರವಲಯ ಸೋಗಾನೆಯಲ್ಲಿರುವ, ಕೇಂದ್ರ ಕಾರಾಗೃಹ (central jail) ದ ಮೇಲೆ ಪೊಲೀಸರು ದಿಢೀರ್ ದಾಳಿ (police raid) ನಡೆಸಿ, ತಪಾಸಣೆ ನಡೆಸಿದ ಘಟನೆ aug – 28 ಬುಧವಾರ ಮುಂಜಾನೆ ನಡೆದಿದೆ.
ಜಿಲ್ಲಾ ರಕ್ಷಣಾಧಿಕಾರಿ (sp) ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ಸುಮಾರು 120 ಪೊಲೀಸ್ ಅಧಿಕಾರಿ – ಸಿಬ್ಬಂದಿಗಳು ದಾಳಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಜೈಲ್ (jail) ನ ಪ್ರತಿಯೊಂದು ಬ್ಯಾರೆಕ್ ಗೆ ಪೊಲೀಸರು ಭೇಟಿಯಿತ್ತು ತಪಾಸಣೆ ನಡೆಸಿದ್ದಾರೆ.
ಜೈಲಿನಲ್ಲಿರುವ ಪ್ರತಿಯೋರ್ವರನ್ನು ಇಂಚಿಂಚೂ ಶೋಧನೆ ಮಾಡಿದ್ದಾರೆ. ಆದರೆ ಯಾವುದೇ ಬ್ಯಾರಕ್ ನಲ್ಲಿ ಹಾಗೂ ಅಲ್ಲಿರುವವರ ಬಳಿ ಯಾವುದೇ ನಿಷೇಧಿತ ವಸ್ತುಗಳು ಪೊಲೀಸರಿಗೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಸ್ಥಳಾಂತರ : ಈ ನಡುವೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ (chitradurga renukaswami murder case) ದಲ್ಲಿ ಬಂಧಿತರಾಗಿ, ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ (bengaluru parappana agrahara jail) ನಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ನಟ ದರ್ಶನ್ (actor darshan) ಹಾಗೂ ಸಹಚರರಲ್ಲಿ, ಹಲವರನ್ನು ವಿವಿಧ ಜೈಲ್ ಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಇದರಲ್ಲಿ ಇಬ್ಬರು ಸಹಚರರನ್ನು ಶಿವಮೊಗ್ಗ ಸೆಂಟ್ರಲ್ ಜೈಲ್ ಗೆ ಶಿಫ್ಟ್ ಮಾಡಲಾಗುತ್ತಿದೆ.
ಕಟ್ಟುನಿಟ್ಟಿನ ಕ್ರಮ : ಬೆಂಗಳೂರು ಪರಪ್ಪನ ಅಗ್ರಹಾರ ಜೈಲ್ ನಲ್ಲಿರುವ ಚಿತ್ರನಟ ದರ್ಶನ್ (actor darshan) ಅವರಿಗೆ ರಾಜಾತಿಥ್ಯ ದೊರಕುತ್ತಿರುವ ಆರೋಪದ ನಂತರ ಎಚ್ಚೆತ್ತುಕೊಂಡಿರುವ ಬಂಧೀಖಾನೆ ಇಲಾಖೆಯು, ರಾಜ್ಯದ ಇತರೆ ಜೈಲ್ ಗಳಲ್ಲಿಯೂ ಕಟ್ಟೆಚ್ಚರವಹಿಸಿದೆ. ಯಾವುದೇ ಅಕ್ರಮಗಳಿಗೆ ಆಸ್ಪದವಾಗದಂತೆ ಎಚ್ಚರವಹಿಸುವಂತೆ ಜೈಲ್ ಅಧಿಕಾರಿಗಳಿಗೆ ಸೂಚನೆ ರವಾನಿಸಿದೆ ಎಂದು ಹೇಳಲಾಗಿದೆ.

