
shimoga | ಶಿವಮೊಗ್ಗ : ಕೆ.ಎಸ್.ಈಶ್ವರಪ್ಪ ವಿರುದ್ಧದ FIR ರದ್ದತಿಗೆ ಆಗ್ರಹಿಸಿ SP ಕಚೇರಿ ಎದುರು ಪ್ರತಿಭಟನೆ!
ಶಿವಮೊಗ್ಗ, ನ. 16: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿರುದ್ದ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿ, ರಾಷ್ಟ್ರಭಕ್ತರ ಬಳಗ ಸಂಘಟನೆಯು ನ. 16 ರಂದು ಶಿವಮೊಗ್ಗದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಎಸ್ಪಿಗೆ ಮನವಿ ಪತ್ರ ಅರ್ಪಿಸಿತು.
ನ. 13 ರಂದು ಕೆ.ಎಸ್.ಈಶ್ವರಪ್ಪ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಅನ್ಯ ಧರ್ಮ ಹಾಗೂ ಅನ್ಯ ಪಕ್ಷದ ವಿರುದ್ದ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ನ. 14 ರಂದು ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಎಫ್ಐಆರ್ ಹಾಕಿದ್ದರು.
ಇದಕ್ಕೆ ರಾಷ್ಟ್ರಭಕ್ತರ ಬಳಗ ಆಕ್ರೋಶ ವ್ಯಕ್ತಪಡಿಸಿದೆ. ಕೆ.ಎಸ್.ಈಶ್ವರಪ್ಪ ಅವರು ಹಿಂದೂ ಧರ್ಮದ ಹಿತದೃಷ್ಟಿ, ಬಡ ರೈತರ ಬಗ್ಗೆಯಿರುವ ಕಾಳಜಿಯ ಮೇಲೆ ಹೇಳಿಕೆ ನೀಡಿದ್ದಾರೆ. ಇದರಿಂದ ಕಾಂಗ್ರೆಸ್ ಸರ್ಕಾರ ವಿಚಲಿತಗೊಂಡಿದೆ.
ಕೆ.ಎಸ್.ಈಶ್ವರಪ್ಪರ ವಿರುದ್ದ ದುರುದ್ದೇಶದಿಂದ, ರಾಜಕೀಯ ಪ್ರೇರಿತವಾಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ತಕ್ಷಣವೇ ಅವರ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸಬೇಕು ಎಂದು ಸಂಘಟನೆಯು ಪೊಲೀಸ್ ಇಲಾಖೆಗೆ ಆಗ್ರಹಿಸಿದೆ.
ಈಶ್ವರಪ್ಪರ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದು ಮಾಡದಿದ್ದರೆ, ಮುಂದಿನ ದಿನಗಳಂದು ಸಂಘಟನೆವತಿಯಿಂದ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದೆ. ಪ್ರತಿಭಟನೆಯಲ್ಲಿ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಸೇರಿದಂತೆ ರಾಷ್ಟ್ರಭಕ್ತರ ಬಳಗದ ಪ್ರಮುಖರು ಉಪಸ್ಥಿತರಿದ್ದರು.
Demanding that the FIR registered against former DCM KS Eshwarappa should be quashed, Rashtrabhaktara Balaga organized a protest in front of the SP office in Shimoga on November 16 and submitted a letter of appeal to the SP.