
shimoga | ‘ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದಿಂದ 25 ಆಟೋ ಶೆಲ್ಟರ್ ನಿರ್ಮಾಣ’ : ಆಯುಕ್ತ ವಿಶ್ವನಾಥ್ ಪಿ ಮುದಜ್ಜಿ
ಶಿವಮೊಗ್ಗ (shivamogga), ಆಗಸ್ಟ್ 5: ‘ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 25 ಆಟೋ ಶೆಲ್ಟರ್ ಗಳ ನಿರ್ಮಾಣ ಮಾಡಲಾಗುವುದು’ ಎಂದು ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾದ ವಿಶ್ವನಾಥ್ ಪಿ ಮುದಜಿ ಅವರು ತಿಳಿಸಿದ್ದಾರೆ.
ಆಗಸ್ಟ್ 5 ರಂದು ಶಿವಮೊಗ್ಗ ನಗರದ ವಿವಿಧೆಡೆ ಪ್ರಾಧಿಕಾರದಿಂದ ಕೈಗೆತ್ತಿಕೊಳ್ಳಲಾಗಿರುವ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳ ವೀಕ್ಷಣೆ ನಡೆಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಆಟೋಗಳ ನಿಲುಗಡೆ ಸುಸಜ್ಜಿತ ನಿಲ್ದಾಣ ಅಭಿವೃದ್ದಿಗೊಳಿಸಲಾಗುವುದು. ಈಗಾಗಲೇ ಸಮಗ್ರ ಕ್ರಿಯಾ ಯೋಜನೆ ರೂಪಿಸಲಾಗಿದೆ. ಇಷ್ಟರಲ್ಲಿಯೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಶಿವಮೊಗ್ಗ ನಗರ ವ್ಯಾಪ್ತಿ ಆರಂಭವಾಗುವ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಸ್ವಾಗತ ಕಮಾನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇಷ್ಟರಲ್ಲಿಯೇ ಸದರಿ ಕಾಮಗಾರಿಯೂ ಆರಂಭಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ನಗರಾಭಿವೃದ್ದಿ ಪ್ರಾಧಿಕಾರದಿಂದ ನಗರದ ವಿವಿಧೆಡೆ ಉದ್ಯಾನವನಗಳ ಅಭಿವೃದ್ದಿ ಕೈಗೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಗುಣಮಟ್ಟದ ಕಾಮಗಾರಿ ನಿರ್ವಹಣೆ ಜೊತೆಗೆ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಂಬಂಧಿಸಿದ ಗುತ್ತಿಗೆ ದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಮಲ್ಲಿಗೇನಹಳ್ಳಿಯ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿನ ರಿಂಗ್ ರಸ್ತೆ ಅಭಿವೃದ್ದಿಗೆ ನಿರ್ಧರಿಸಲಾಗಿದೆ. ಮಾಸ್ಟರ್ ಪ್ಲ್ಯಾನ್ ಸಿದ್ದಪಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪ್ರಾಧಿಕಾರದಿಂದ ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳ ಯೋಜನಾಬದ್ಧ ಅಭಿವೃದ್ದಿಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ನಗರಾಭಿವೃದ್ದಿ ಪ್ರಾಧಿಕಾರ ಆಡಳಿತ ಕೈಗೊಳ್ಳಲಿದೆ ಎಂದು ಆಯುಕ್ತ ವಿಶ್ವನಾಥ್ ಪಿ ಮುದಜಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಜಿ. ಆರ್. ಬಸವರಾಜಪ್ಪ, ಸಹಾಯಕ ಅಭಿಯಂತರ (ಎಇ) ವೀರಗಂಗಾಧರ ಸ್ವಾಮಿ ಎಸ್ ಎಂ ಮೊದಲಾದವರು ಉಪಸ್ಥಿತರಿದ್ದರು.
ಮನವಿ ಅರ್ಪಣೆ : ಸೋಮಿನಕೊಪ್ಪಕ್ಕೆ ಭೇಟಿ ನೀಡಿದ್ದ ವೇಳೆ ಕೆ ಹೆಚ್ ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದಿಂದ ಆಯುಕ್ತರಿಗೆ ಮನವಿ ಪತ್ರ ಅರ್ಪಿಸಲಾಯಿತು. ಪ್ರಸ್ತುತ ಉದ್ಯಾನವನ ಅಭಿವೃದ್ದಿ ಕಾಮಗಾರಿ ವೇಳೆ, ವಾಕಿಂಗ್ ಪಾಥ್ ನಿರ್ಮಿಸಬೇಕು. ಮಕ್ಕಳಿಗೆ ಆಟದ ಸಾಮಗ್ರಿ, ವ್ಯಾಯಾಮ ಉಪಕರಣ, ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸಬೇಕು ಎಂದು ಕೋರಿದರು.
ಈ ಕುರಿತಂತೆ ಅಧ್ಯಕ್ಷರೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು. ಇದೇ ವೇಳೆ ಉದ್ಯಾನವನದಲ್ಲಿ ಗಿಡ ನೆಟ್ಟು ಪರಿಸರ ಪ್ರೇಮ ಮೆರೆದರು. ಪರಿಸರ ಸಂರಕ್ಷಣೆಗೂ ಪ್ರಾಧಿಕಾರ ಹೆಚ್ಚಿನ ಒತ್ತು ನೀಡಲಿದೆ ಎಂದು ಹೇಳಿದರು.
Shimoga, August 5: Vishwanath P Mudaji, Commissioner of Shimoga – Bhadravati Urban Development Authority said that 25 auto shelters will be constructed within the city limits of Shimoga. He was talking to reporters who met him on August 5 after inspecting the park development works undertaken by the authority in various parts of Shimoga city.