
shimoga | ಜೈಲಿನಿಂದ ಹೊರಬಂದ 15 ದಿನದಲ್ಲಿಯೇ ಮಾವನನ್ನೇ ಕೊಲೆ ಮಾಡಿದ ಅಳಿಯ!
ಶಿವಮೊಗ್ಗ (shivamogga), ಫೆ. 27: ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನ ಹನುಮಂತಾಪುರ ಗ್ರಾಮದಲ್ಲಿ, ಫೆ. 26 ರಂದು ನಡೆದ ರಾಜಶೇಖರಪ್ಪ (60) ರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಅಳಿಯ ಮಂಜುನಾಥ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಂಜುನಾಥ್ ಮದ್ಯ ವ್ಯಸನಿಯಾಗಿದ್ದು, ತನ್ನ ಮಾವ ರಾಜಶೇಖರಪ್ಪರೊಂದಿಗೆ ಆಗಾಗ್ಗೆ ಗಲಾಟೆ ಮಾಡುತ್ತಿದ್ದ. ಶಿವರಾತ್ರಿ ಹಬ್ಬದ ದಿನದಂದು ಕೂಡ ಆರೋಪಿಯು ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ, ಮಾವನೊಂದಿಗೆ ಗಲಾಟೆ ಮಾಡಿ ಕೊಲೆ ಮಾಡಿರುವುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.
ಜೈಲು ಸೇರಿದ್ದ : ಇತ್ತೀಚೆಗೆ ಮನೆಯಲ್ಲಿ ಶ್ರೀಗಂಧದ ತುಂಡು ಇಟ್ಟುಕೊಂಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಅರಣ್ಯ ಇಲಾಖೆಯಿಂದ ಆರೋಪಿ ಬಂಧಿತನಾಗಿ ಜೈಲು ಸೇರಿದ್ದ. ಕಳೆದ 15 ದಿನಗಳ ಹಿಂದಷ್ಟೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.
ಫೆ. 26 ರ ಶಿವರಾತ್ರಿ ದಿನದಂದು ಮಾವ ರಾಜಶೇಖರಪ್ಪರ ಮನೆಗೆ ಆರೋಪಿ ಆಗಮಿಸಿದ್ದಾನೆ. ಮಾವನೊಂದಿಗೆ ಜಗಳ ಮಾಡಿಕೊಂಡಿದ್ದಾನೆ. ನಂತರ ಕ್ರಿಕೆಟ್ ಬ್ಯಾಟ್ ನಿಂದ ತಲೆಗೆ ಹೊಡೆದು, ಬಟ್ಟೆಯೊಂದರಿಂದ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ತದನಂತರ ಶವವನ್ನು ಮನೆಯ ಹಿಂಭಾಗದಲ್ಲಿ ಪಾಳು ಬಿದ್ದಿದ್ದ ಶೌಚಾಲಯ ಕೊಠಡಿ ಬಳಿ ಎಸೆದು ತೆರಳಿದ್ದ ಎಂದು ಪೊಲೀಸ್ ಮೂಲಗಳು ತಿಳಿಸುತ್ತವೆ.
ರಾಜಶೇಖರಪ್ಪರ ಪುತ್ರಿ ಸಂಜೆ ಮನೆಗೆ ಆಗಮಿಸಿದಾಗ, ಮನೆಯ ಒಳಭಾಗದಲ್ಲಿ ರಕ್ತದ ಕಲೆ ಕಂಡುಬಂದಿದೆ. ಮನೆಯೆಲ್ಲ ಹುಡುಕಿದಾಗ, ಹಿಂಭಾಗದ ಶೌಚಾಲಯದ ಬಳಿ ತಂದೆಯ ದೇಹ ಬಿದ್ದಿರುವುದು ಬೆಳಕಿಗೆ ಬಂದಿದೆ. ನಂತರ ಗ್ರಾಮಸ್ಥರಿಗೆ ವಿಚಾರ ತಿಳಿದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ಸ್’ಪೆಕ್ಟರ್ ಲಕ್ಷ್ಮೀಪತಿ ಮತ್ತವರ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ಸ್ಥಳೀಯರ ಮಾಹಿತಿ ಆಧಾರದ ಮೇಲೆ ಆರೋಪಿಯನ್ನು ಫೆ. 26 ರ ರಾತ್ರಿಯೇ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಯು, ಮಾವನನ್ನು ಕೊಲೆ ಮಾಡಿರುವ ವಿಚಾರ ಬಾಯ್ಬಿಟ್ಟಿದ್ದಾನೆ.
ಈ ಕುರಿತಂತೆ ಆರೋಪಿ ವಿರುದ್ದ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Shimoga, Feb 27: Police have arrested son-in-law Manjunath (40) in connection with the murder of Rajasekharappa (60) on February 26 in Hanumantapura village of Holehonnuru in Bhadravati taluk. A case has been registered against the accused at the holehonnuru police station and the police are continuing the investigation.