ಯುವತಿಯ ನಾಪತ್ತೆ – ಹತ್ಯೆ ಪ್ರಕರಣ : ಪೊಲೀಸರ ಜೊತೆಗೆ ಓಡಾಡಿಕೊಂಡಿದ್ದ ಐನಾತಿ ಹಂತಕ..!
ವರದಿ : ಬಿ. ರೇಣುಕೇಶ್
ತೀರ್ಥಹಳ್ಳಿ (thirthahalli), ಜು. 7: ಮುಚ್ಚಿ ಹೋಗಬಹುದಾಗಿದ್ದ ಮಲೆನಾಡಿನ (malnad) ಕುಗ್ರಾಮವೊಂದರ ಯುವತಿಯ ನಾಪತ್ತೆ – ಹತ್ಯೆ ಪ್ರಕರಣವೊಂದು, ತೀರ್ಥಹಳ್ಳಿ ತಾಲೂಕು ಆಗುಂಬೆ ಠಾಣೆ (agumbe police station) ಪೊಲೀಸರ ಕಾರ್ಯದಕ್ಷತೆ – ಪ್ರಾಮಾಣಿಕ ತನಿಖೆಯಿಂದ ಬಯಲಿಗೆ ಬರುವಂತಾಗಿದೆ!
ಎಲ್ಲದಕ್ಕಿಂತ ಮುಖ್ಯವಾಗಿ ಯುವತಿಯ ಕೊಲೆ (murder) ಮಾಡಿದ್ದ ಆರೋಪಿ (accused), ತನ್ನ ಮೇಲೆ ಸಣ್ಣ ಅನುಮಾನವೂ ಬರಬಾರದೆಂದು, ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರೊಂದಿಗೆ ಎರಡ್ಮೂರು ದಿನಗಳ ಕಾಲ ಓಡಾಡಿಕೊಂಡಿದ್ದ ಸಂಗತಿಯೂ ಬೆಳಕಿಗೆ ಬಂದಿದೆ!
ಆದರೆ ಸಬ್ ಇನ್ಸ್’ಪೆಕ್ಟರ್ ರಂಗನಾಥ್ ಅಂತರಗಟ್ಟಿ (sub inspector ranganath antaragatti) ನೇತೃತ್ವದ ಪೊಲೀಸ್ ತಂಡದ ತನಿಖೆಯ ಚಾಕಚಕ್ಯತೆಯಿಂದ, ಜೊತೆಯಲ್ಲಿಯೇ ಓಡಾಡಿಕೊಂಡಿದ್ದ ಆರೋಪಿಯು ಜೈಲು ಪಾಲಾಗುವಂತಾಗಿದೆ. ಸಿನಿಮೀಯ ಶೈಲಿಯ ಕೊಲೆ ಪ್ರಕರಣವೊಂದು (cinematic murder case) ಬೆಳಕಿಗೆ ಬರುವಂತಾಗಿದೆ.
ಏನೀದು ಪ್ರಕರಣ? : ತೀರ್ಥಹಳ್ಳಿ (thirthahalli) ತಾಲೂಕಿನ ಹಸಿಮನೆ ಹೊಸೂರು ಗ್ರಾಮದ ಪೂಜಾ ಎ ಕೆ (24) ಎಂಬ ಯುವತಿ ನಾಪತ್ತೆ ಸಂಬಂಧ, ಆಗುಂಬೆ ಪೊಲೀಸ್ ಠಾಣೆಯಲ್ಲಿ ಕಳೆದ ಜೂನ್ 30 ರಂದು ಪ್ರಕರಣ ದಾಖಲಾಗಿತ್ತು. ಧರ್ಮಸ್ಥಳ (dharmasthala) ಸಂಘದ ಸೇವಾ ಪ್ರತಿನಿಧಿ ಕೆಲಸಕ್ಕೆಂದು ಮನೆಯಿಂದ ಬೆಳಿಗ್ಗೆ ಹೊರಹೋದ ಮಗಳು ಮನೆಗೆ ಆಗಮಿಸಿಲ್ಲ ಎಂದು ತಂದೆ ಪೊಲೀಸರಿಗೆ ದೂರು ನೀಡಿದ್ದರು.

ಯುವತಿ ನಾಪತ್ತೆ ಪ್ರಕರಣವನ್ನು (missing case) ಗಂಭೀರವಾಗಿ ಪರಿಗಣಿಸಿದ ಆಗುಂಬೆ (agumbe) ಠಾಣೆ ಪಿಎಸ್ಐ ರಂಗನಾಥ್ ಅಂತರಗಟ್ಟಿ ಅವರು, ತಕ್ಷಣವೇ ತನಿಖೆ ನಡೆಸಲಾರಂಭಿಸುತ್ತಾರೆ. ಯುವತಿಯ ಮೊಬೈಲ್ ಫೋನ್ ಕಾಲ್ ರೆಕಾರ್ಡ್ (mobile phone) ವಿವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮನೆ ಮನೆಗೆ ತೆರಳಿ ಯುವತಿಯ ಕುರಿತಂತೆ ಮಾಹಿತಿ ಕಲೆ ಹಾಕಿದ್ದರು.
ಹಲವು ಜನರನ್ನು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಯುವತಿಯ ಸಂಬಂಧಿ ಹಾಗೂ ಪಿಕ್ ಅಪ್ ವಾಹನ ಚಾಲನೆ (driver) ವೃತ್ತಿ ಮಾಡುತ್ತಿದ್ದ ನಾಲೂರು ಒಡೆದ ಕೊಡಗೆ ಗ್ರಾಮದ ನಿವಾಸಿ ಮಣಿಕಂಠ (25) ಎಂಬಾತ, ಪೂಜಾಳು ಕೆಂಪು ಕಾರೊಂದರಲ್ಲಿ ಹೋಗಿದ್ದನ್ನು ನೋಡಿದ್ದಾಗಿ ಹೇಳಿದ್ದ. ತಾನೂ ಕೂಡ ಆಕೆಯ ಮೊಬೈಲ್ ಪೋನ್ ಗೆ ಕರೆ ಮಾಡಿ ಮಾತನಾಡಿದ್ದೆ ಎಂದು ತಿಳಿಸಿದ್ದ.
ಮಣಿಕಂಠ ನೀಡಿದ ಕಾರಿನ ಮಾಹಿತಿ ಆಧಾರದ ಮೇಲೆ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದರು. ಅನುಮಾನಾಸ್ಪದ ವ್ಯಕ್ತಿಗಳನ್ನು(suspicious persons) ವಿಚಾರಣೆಗೊಳಪಡಿಸಿದ್ದರು. ಎರಡ್ಮೂರು ದಿನಗಳ ಕಾಲ ಮಣಿಕಂಠನು ಪೊಲೀಸರು ಹಾಗೂ ಯುವತಿಯ ಕುಟುಂಬದವರ ಜೊತೆಯೇ ಪೂಜಾಳ ಪತ್ತೆ ಕಾರ್ಯದಲ್ಲಿ ಓಡಾಡಿಕೊಂಡಿದ್ದ. ಪೊಲೀಸರು (police) ಎಷ್ಟೆ ಪ್ರಯತ್ನ ನಡೆಸಿದರೂ ಪೂಜಾಳ (pooja) ಸುಳಿವು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇಡೀ ಪ್ರಕರಣ ನಿಗೂಢವಾಗಿ ಪರಿಣಮಿಸಿತ್ತು.
ಸಿಕ್ಕಿದ ಸುಳಿವು : ಮಣಿಕಂಠನ ಸ್ನೇಹಿತನೋರ್ವನನ್ಜು ಪೊಲೀಸರು ವಿಚಾರಣೆಗೊಳಪಡಿಸಿದ್ದರು (inquiry). ಈ ವೇಳೆ ಯುವತಿ ನಾಪತ್ತೆಯಾದ ದಿನ ತಾನು ಹಾಗೂ ಮಣಿಕಂಠ ಜೊತೆಯಲ್ಲಿಯೇ ಇರುವುದಾಗಿ ಹೇಳಿಕೊಂಡಿದ್ದ. ಅನುಮಾನದ ಮೇರೆಗೆ ಮತ್ತೊಮ್ಮೆ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಮಣಿಕಂಠನು ತನ್ನ ಕಾರನ್ನು ಕೊಂಡೊಯ್ದಿದ್ದ. ಆತನ ಪಿಕ್ ಅಪ್ ವಾಹನದಲ್ಲಿ ತಾನು ಮಲಗಿಕೊಂಡಿದ್ದೆ ಎಂದು ತದ್ವಿರುದ್ದ ಮಾಹಿತಿ ನೀಡಿದ್ದ.
ಇದರ ಆಧಾರದ ಮೇಲೆ, ಕಳೆದ ಕೆಲ ದಿನಗಳಿಂದ ತಮ್ಮ ಜೊತೆಯಲ್ಲಿಯೇ ಓಡಾಡಿಕೊಂಡಿದ್ದ ಮಣಿಕಂಠನನ್ನು ಠಾಣೆಗೆ ಕರೆಯಿಸಿಕೊಂಡು ತಮ್ಮದೆ ಶೈಲಿಯಲ್ಲಿ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಪೂಜಾಳ ಹತ್ಯೆಯ ವೃತ್ತಾಂತವನ್ನು ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಇಲಾಖೆ ಮೂಲಗಳು ಹೇಳುತ್ತವೆ.
ಹತ್ಯೆ : ಪೂಜಾಳ ಮೊಬೈಲ್ ಪೋನ್ ಗೆ ಕರೆ ಮಾಡಿ ಕರೆಯಿಸಿಕೊಂಡಿದ್ದ ಆರೋಪಿಯು, ಕಾರೊಂದರಲ್ಲಿ ಆಕೆಯನ್ನು ನಾಲೂರು ಕೊಳಿಗೆ ಗ್ರಾಮದ ಕವಲೇಗುಡ್ಡದ ಬಳಿ ಕರೆದೊಯ್ದಿದ್ದ. ಅಲ್ಲಿ ಕತ್ತು ಹಿಸುಕಿ (strangled) ಆಕೆಯನ್ನು ಕೊಲೆ ಮಾಡಿದ್ದ. ನಂತರ ಮೃತ ದೇಹವನ್ನು (dead body) ಕವಲೇಗುಡ್ಡದ ಬೆಟ್ಟದ ಮೇಲಿಂದ ಕೆಳಕ್ಕೆ ಎಸೆದಿದ್ದ ಸಂಗತಿ ಬಾಯ್ಬಿಟ್ಟಿದ್ದ. ಇದರ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಭಾನುವಾರ (ಜು. 7) ರಂದು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದರು. ಈ ವೇಳೆ ಮೃತದೇಹವು ಮರವೊಂದರ ರಂಬೆಗೆ (tree branch) ಸಿಲುಕಿ ಕೊಂಡಿದ್ದು, ಭಾಗಶಃ ಕೊಳೆತ ಸ್ಥಿತಿಯಲ್ಲಿರುವುದು ಪತ್ತೆಯಾಗಿತ್ತು.
ಕಾರಣವೇನು? : ಸುಮಾರು ಎರಡು ವರ್ಷಗಳ ಹಿಂದೆ ಪೂಜಾಳ ವಿವಾಹವು (marriage) ಯುವಕನೋರ್ವನೊಂದಿಗೆ ನಡೆದಿತ್ತು. ಆದರೆ ಕಾರಣಾಂತರಗಳಿಂದ ಪೂಜಾ ತವರು ಮನೆ ಸೇರಿದ್ದಳು. ತದನಂತರ ಸಂಬಂಧಿ ಮಣಿಕಂಠನ ಜೊತೆ ಹೆಚ್ಚಿನ ಒಡನಾಟವಿಟ್ಟುಕೊಂಡಿದ್ದಳು. ಈ ನಡುವೆ ಪೂಜಾಳು ಮತ್ತೋರ್ವ ಯುವಕನೊಂದಿಗೆ ಸಲುಗೆಯಿಂದಿರುವ ಮಾಹಿತಿ ಆರೋಪಿಗಿತ್ತು.
ಪೂಜಾಳ ಹುಟ್ಟುಹಬ್ಬಕ್ಕೆ (birthday) ಮಣಿಕಂಠ ಕೊಡಿಸಿದ್ದ ಕೇಕ್ ನ್ನು ಪೂಜಾಳು, ಆರೋಪಿಯ ಬದಲಾಗಿ ಸಲುಗೆಯಿಂದಿದ್ದ ಯುವಕನೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಇದರಿಂದ ಆರೋಪಿ ಆಕ್ರೋಶಗೊಂಡಿದ್ದ. ಈ ಎಲ್ಲ ಕಾರಣಗಳಿಂದ ಆರೋಪಿಯು ಪೂಜಾಳ ಹತ್ಯೆಗೆ ನಿರ್ಧರಿಸಿದ್ದ ಎಂದು ಪೊಲೀಸ್ ಇಲಾಖೆಯ ಮೂಲಗಳು ಹೇಳುತ್ತವೆ.
ಒಟ್ಟಾರೆ ಆಗುಂಬೆ ಠಾಣೆ ಪಿಎಸ್ಐ ರಂಗನಾಥ್ ಅಂತರಗಟ್ಟಿ ಮತ್ತವರ ಸಿಬ್ಬಂದಿಗಳ ದಕ್ಷ ತನಿಖೆಯಿಂದ ನಿಗೂಢವಾಗಿದ್ದ ಯುವತಿಯ ನಾಪತ್ತೆ ಪ್ರಕರಣ ಬಯಲಿಗೆ ಬರುವಂತಾಗಿದೆ. ಜೊತೆಗೆ ಜೊತೆಯಲ್ಲಿಯೇ ಓಡಾಡಿಕೊಂಡಿದ್ದ ಹತ್ಯೆಯ ಆರೋಪಿ ಜೈಲು ಪಾಲಾಗುವಂತಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಭೇಟಿ

*** ಯುವತಿಯ ಶವ ಪತ್ತೆಯಾದ ತೀರ್ಥಹಳ್ಳಿ ತಾಲೂಕು ನಾಲೂರು ಕೊಳಿಗೆ ಗ್ರಾಮದ ಕವಲೇಗುಡ್ಡದ ಬೆಟ್ಟಕ್ಕೆ ಭಾನುವಾರ (ಜು. 7) ರಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ (shimoga sp g k mithunkumar) ಅವರು ಭೇಟಿಯಿತ್ತು ಪರಿಶೀಲನೆ ನಡೆಸಿದರು. ನಂತರ ಶಿವಮೊಗ್ಗ ನಗರದ ಎಸ್ಪಿ ಕಚೇರಿಯಲ್ಲಿ (shimoga sp office) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಪೂಜಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಸಂಬಂಧಿ ಮಣಿಕಂಠ ಎಂಬಾತನನ್ನು ಬಂಧಿಸಲಾಗಿದೆ (arrest). ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ ನಂತರ, ಶವವನ್ನು ಬೆಟ್ಟದ ಮೇಲಿಂದ ಆರೋಪಿ ಎಸೆದಿದ್ದ’ ಎಂದು ಮಾಹಿತಿ ನೀಡಿದ್ದಾರೆ. ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ಸುತಾರ, ಇನ್ಸ್’ಪೆಕ್ಟರ್ ಶ್ರೀಧರ್, ಸಬ್ ಇನ್ಸ್’ಪೆಕ್ಟರ್ ರಂಗನಾಥ್ ಅವರು ಪ್ರಕರಣದ ಕುರಿತಂತೆ ಕೂಲಕಂಷ ತನಿಖೆ ನಡೆಸಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಆಗುಂಬೆ ಪೊಲೀಸ್ ಠಾಣೆ ಅಧಿಕಾರಿ – ಸಿಬ್ಬಂದಿಗಳ ಅವಿರತ ತನಿಖೆ!

*** ಪೂಜಾಳ ಪ್ರಕರಣದಲ್ಲಿ ಆಗುಂಬೆ ಪೊಲೀಸ್ ಠಾಣೆ ಸಬ್ ಇನ್ಸ್’ಪೆಕ್ಟರ್ ರಂಗನಾಥ್ ಅಂತರಗಟ್ಟಿ ಮತ್ತವರ ಸಿಬ್ಬಂದಿಗಳ ಕಾರ್ಯವೈಖರಿ ನಿಜಕ್ಕೂ ಅಭಿನಂದನಾರ್ಹವಾದುದಾಗಿದೆ. ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಐದಾರು ದಿನಗಳ ಕಾಲ ನಿರಂತರವಾಗಿ ತನಿಖೆ ನಡೆಸಿದ್ದಾರೆ.
ಹಲವೆಡೆ ಮನೆಮನೆಗೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ಇದೆಲ್ಲದರ ಫಲವಾಗಿ ಮುಚ್ಚಿ ಹೋಗಬಹುದಾಗಿದ್ದ ನಾಪತ್ತೆ – ಹತ್ಯೆ ಪ್ರಕರಣ ಬಯಲಿಗೆ ಬರುವಂತಾಗಿದೆ.
