ತೀರ್ಥಹಳ್ಳಿ / ಹೊಸನಗರ, ಜು. 30: ಮಲೆನಾಡು ಭಾಗದಲ್ಲಿ ಮತ್ತೆ ಭಾರೀ ಮಳೆಯಾಗಲಾರಂಭಿಸಿದೆ (heavy rainfall). ನದಿ, ಕೆರೆಕಟ್ಟೆ, ಹಳ್ಳಕೊಳ್ಳಗಳು ಉಕ್ಕಿ ಹರಿಯಲಾರಂಭಿಸಿವೆ. ಈ ನಡುವೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ತೀರ್ಥಹಳ್ಳಿ (thirthalli) ಹಾಗೂ ಹೊಸನಗರ (hosanagara) ತಾಲೂಕಿನ ಶಾಲಾ – ಕಾಲೇಜುಗಳಿಗೆ ಜು. 31 ರ ಬುಧವಾರ ರಜೆ ಘೋಷಣೆ ಮಾಡಲಾಗಿದೆ.
ಈ ಸಂಬಂಧ ತಾಲೂಕು ಆಡಳಿತಗಳು ಆದೇಶ ಹೊರಡಿಸಿವೆ. ‘ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ 31/7/2024 ರಂದು ಅಂಗನವಾಡಿ ಕೇಂದ್ರಗಳು, ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜ್ ಗಳಿಗೆ ರಜೆ ಘೋಷಣೆ ಮಾಡಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸದರಿ ರಜೆ ದಿನದಂದು ನಡೆಯಬೇಕಾಗಿದ್ದ ತರಗತಿಗಳನ್ನು ಮುಂದಿನ ರಜೆ ದಿನಗಳಂದು ನಡೆಸಿ ಹೊಂದಾಣಿಕೆ ಮಾಡಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.
ಮುಂದುವರಿದ ಮಳೆ : ಜಿಲ್ಲೆಯಾದ್ಯಂತ ಮತ್ತೆ ಮುಂಗಾರು ಮಳೆ (monsoonrain) ಚುರುಕುಗೊಂಡಿದೆ. ಅದರಲ್ಲಿಯೂ ಪಶ್ಚಿಮಘಟ್ಟ (western ghat) ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ (rain). ಎಡೆಬಿಡದೆ ಬೀಳುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

