ಭದ್ರಾವತಿ (bhadravati), ಮೇ 10: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ದಾನವಾಡಿ ಬಳಿ ಭದ್ರಾ ನಾಲೆಗೆ ಪಲ್ಟಿಯಾಗಿ ಬಿದ್ದು ಕಣ್ಮರೆಯಾಗಿದ್ದ ಕಾರು ಪತ್ತೆಯಾಗಿದ್ದು, ಕಾರು ಚಾಲಕ ಮೃತಪಟ್ಟ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕಸವನಹಳ್ಳಿ ನಿವಾಸಿಯಾದ ಬಾಳೆಹೊನ್ನೂರಿನ ಬಾರ್ ವೊಂದರಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಭೋಜರಾಜ್ (33) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಬೊಮ್ಮನಕಟ್ಟೆ ಗ್ರಾಮದಲ್ಲಿರುವ ಸಂಬಂಧಿಯೋರ್ವರ ಮನೆಗೆ ಭೋಜರಾಜ್ ಆಗಮಿಸಿದ್ದರು. ಮೇ 8 ರ ಸಂಜೆ ಹಿಂದಿರುಗುವ ವೇಳೆ, ಚಾಲನೆಯ ನಿಯಂತ್ರಣ ತಪ್ಪಿ ನಾಲೆಗೆ ಕಾರು ಉರುಳಿ ಬಿದ್ದಿತ್ತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ದಳದವರು ಶೋಧ ಕಾರ್ಯಾಚರಣೆ ನಡೆಸಿದ್ದರು. ಆದರೆ ಕಾರಿನ ಸುಳಿವು ಲಭ್ಯವಾಗಿರಲಿಲ್ಲ. ಮೇ. 9 ರಂದು ಮುಳುಗು ತಜ್ಞ ಮಲ್ಪೆ ಈಶ್ವರ್ ಅವರು ಕಾರಿನ ಶೋಧ ಕಾರ್ಯಾಚರಣೆ ನಡೆಸಿದ್ದರು.
ಈ ವೇಳೆ ಕಾರು ಪತ್ತೆಯಾಗಿದ್ದು, ಭೋಜರಾಜ್ ಅವರು ಕಾರಿನೊಳಗೆ ಮೃತಪಟ್ಟಿದ್ದರು. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bhadravati, May 10: A car that had overturned and fallen into the Bhadra canal near Danawadi near Holehonnur in Bhadravati taluk has been found, and the driver has died.

