ಸಾಗರ, ಎ. 28: ಕರ್ಕಶ ಶಬ್ದ ಹೊರಹೊಮ್ಮಿಸುವ ಸೈಲೆನ್ಸರ್ ಅಳವಡಿಸಿಕೊಂಡು, ಶಬ್ದ ಮಾಲಿನ್ಯ ಹಾಗೂ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತಿದ್ದ, ಬೈಕ್ ಸವಾರರಿಗೆ ಶಾಕ್ ನೀಡುವ ಕಾರ್ಯಕ್ಕೆ ಸಾಗರ ಪೊಲೀಸರು ಚಾಲನೆ ನೀಡಿದ್ದಾರೆ..!

ಡಿಫೆಕ್ಟಿವ್ (ದೋಷಪೂರಿತ), ಮಾಡಿಫೈಡ್ (ಮಾರ್ಪಾಡು) ಸೈಲೆನ್ಸರ್ ಅಳವಡಿಸಿಕೊಂಡು ಸಾಗರ ಪಟ್ಟಣದಲ್ಲಿ ಓಡಾಡುತ್ತಿದ್ದ ಬೈಕ್ ಗಳನ್ನು ವಶಕ್ಕೆ ಪಡೆದು ವಾಹನ ಚಾಲಕರ ವಿರುದ್ದ ಕೇಸ್ ದಾಖಲಿಸಲಾರಂಭಿಸಿದ್ದಾರೆ.
ಜೊತೆಗೆ ಬೈಕ್ ಗಳಲ್ಲಿ ಅಳವಡಿಸಲಾಗಿದ್ದ ದೋಷಪೂರಿತ – ಮಾರ್ಪಾಡು ಸೈಲೆನ್ಸರ್ ಗಳನ್ನು ಸಾರ್ವಜನಿಕರ ಸಮ್ಮುಖದಲ್ಲಿಯೇ ಬುಲ್ಡೋಜರ್ ಹರಿಸಿ ನಾಶಗೊಳಿಸುತ್ತಿದ್ದಾರೆ.

ಏ.27 ರಂದು ಒಟ್ಟಾರೆ 27 ಸೈಲೆನ್ಸರ್ ಗಳ ಮೇಲೆ ಬುಲ್ಡೋಜರ್ ಹರಿಸಿ ನಾಶಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಸಾಗರ ಪೊಲೀಸ್ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರಾದ ರೋಹನ್ ಜಗದೀಶ್, ಇನ್ಸ್’ಪೆಕ್ಟರ್ ಪ್ರವೀಣ್ ಕುಮಾರ್, ಸಬ್ ಇನ್ಸ್’ಪೆಕ್ಟರ್ ಹೊಳೆಬಸಪ್ಪ ಹೋಳಿ, ಶ್ರೀಪತಿ ಗಿನ್ನಿ, ಆರ್.ಕೆ.ನಿಂಗಜ್ಜೇರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಪೊಲೀಸ್ ಇಲಾಖೆ ನೀಡಿದ ಎಚ್ಚರಿಕೆಯೇನು?
‘ಯಾವುದೇ ಕಾರಣಕ್ಕೂ ದ್ವಿ ಚಕ್ರ ವಾಹನಗಳಲ್ಲಿ ದೋಷಪೂರಿತ, ಮಾರ್ಪಾಡುಗೊಳಿಸಿದ ಸೈಲೆನ್ಸರ್ ಗಳನ್ನು ಅಳವಡಿಸಿಕೊಳ್ಳಬಾರದು. ನಿರಂತರವಾಗಿ ದೋಷಪೂರಿತ ಸೈಲೆನ್ಸರ್ ಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಸಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು’ ಎಂದು ಸಾಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

