ಶಿವಮೊಗ್ಗ (shivamogga), ಆ. 16: ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಭಾರೀ ಮಳೆಯಾದ (heavy rainfall) ವೇಳೆಯಲ್ಲೆಲ್ಲ, ಕೆಲ ಪ್ರಮುಖ ರಸ್ತೆಗಳು ಜಲಾವೃತವಾಗುತ್ತಿವೆ. ಆ. 16 ರ ಶುಕ್ರವಾರ ಮಧ್ಯಾಹ್ನ ಬಿದ್ದ ಭಾರೀ ಮಳೆಯ ವೇಳೆಯೂ, ಹಲವೆಡೆ ರಸ್ತೆಗಳ ಮೇಲೆಯೇ ಮಳೆ ನೀರು ಹರಿದು ಹೋದ ಘಟನೆ ನಡೆಯಿತು.
ಜೈಲ್ ರಸ್ತೆ, ಹೊಸಮನೆ 5 ನೇ ಕ್ರಾಸ್, ಕಮಲಾ ನೆಹರು ಕಾಲೇಜ್ ರಸ್ತೆ ಸೇರಿದಂತೆ ಕೆಲವೆಡೆ ರಸ್ತೆಗಳ ಮೇಲೆಯೇ ಮಳೆ ನೀರು ಹರಿದು ಜನ – ವಾಹನ ಸಂಚಾರಕ್ಕೆ ಅಡ್ಡಿಯಾಗಿ ಪರಿಣಮಿಸಿತ್ತು.
ಅವ್ಯವಸ್ಥಿತ ಚರಂಡಿ, ಯುಜಿಡಿ ಹಾಗೂ ರಾಜಕಾಲುವೆಗಳಿಂದ ಮಳೆ ನೀರು(rain water) ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ರಸ್ತೆಗಳ ಮೇಲೆಯೇ ಮಳೆ ನೀರು ಹರಿದು ಹೋಗುವಂತಾಗಿದೆ ಎಂದು ನಾಗರೀಕರು ದೂರುತ್ತಾರೆ.
ಸ್ಮಾರ್ಟ್ ಸಿಟಿ (smart city) ಆಡಳಿತದಿಂದ ಅನುಷ್ಠಾನಗೊಳಿಸಿದ ಅವ್ಯವಸ್ಥಿತ ಕಾಮಗಾರಿಗಳಿಂದ, ನಾಗರೀಕರು ತೊಂದರೆ ಎದುರಿಸುವಂತಾಗಿದೆ. ಇನ್ನಾದರೂ ಆಡಳಿತ ಅವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ನಾಗರೀಕರು ಆಗ್ರಹಿಸುತ್ತಾರೆ.

