shikaripura | ಶಿಕಾರಿಪುರ ತಾಲೂಕಿನ ಕೋಟಿಪುರ ಗ್ರಾಮದಲ್ಲಿ ಕೆಎಸ್ಆರ್’ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ- ಕಾರಣವೇನು?

Attack on Kotipura KSRTC Bus Conductor of Shikaripura Taluk - What is the reason? ಶಿಕಾರಿಪುರ ತಾಲೂಕಿನ ಕೋಟಿಪುರ ಕೆಎಸ್ಆರ್’ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ- ಕಾರಣವೇನು?

ಶಿಕಾರಿಪುರ (shikaripur), ಸೆಪ್ಟೆಂಬರ್ 18: ಶಿಕಾರಿಪುರ ತಾಲೂಕಿನ ಕೋಟಿಪುರ ಗ್ರಾಮದಲ್ಲಿ ಕೆಎಸ್ಆರ್’ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂವರು ಗ್ರಾಮಸ್ಥರ ವಿರುದ್ದ ಪ್ರಕರಣ ದಾಖಲಾದ ಘಟನೆ ನಡೆದಿದೆ.

ತನ್ವೀರ್ ಹೊರಕೆರೆ (38) ಹಲ್ಲೆಗೊಳಗಾದ ಬಸ್ ಕಂಡಕ್ಟರ್ ಎಂದು ಗುರುತಿಸಲಾಗಿದೆ. ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಶಿಕಾರಿಪುರ – ಮುಡುಬಾಸಿದ್ದಾಪುರ ಮಾರ್ಗದಲ್ಲಿ ಸಂಚರಿಸುವ ಬಸ್ ನಲ್ಲಿ ಕಂಡಕ್ಟರ್ ಆಗಿದ್ದಾರೆ.

ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಯ ವಿರುದ್ದ ಕಂಡಕ್ಟರ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ  ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಂಡಕ್ಟರ್ ದೂರಿನಲ್ಲಿ ಏನೀದೆ? : ‘ಸೆಪ್ಟೆಂಬರ್ 17 ರ ಸಂಜೆ ಶಿಕಾರಿಪುರ ಬಸ್ ನಿಲ್ದಾಣದಲ್ಲಿ ಬಸ್ ನಿಂತಿದ್ದ ವೇಳೆ, ಕೆಲ ಶಾಲಾ ವಿದ್ಯಾರ್ಥಿಗಳು ಚಾಲಕ ಕುಳಿತುಕೊಳ್ಳುವ ಸೀಟಿನ ಬಾಗಿಲಿನ ಮೂಲಕ ಬಸ್ ಹತ್ತಲು ಮುಂದಾಗಿದ್ದರು.

ಸದರಿ ವಿದ್ಯಾರ್ಥಿಗಳಿಗೆ ಡ್ರೈವರ್ ಸೀಟಿನ ಬಾಗಿಲಿನಿಂದ ಹತ್ತದಂತೆ ತಿಳಿಸಿ, ಬಸ್ ನಿಂದ ಕೆಳಗಿಳಿಸಿದೆ. ನಂತರ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳನ್ನು ಬಸ್ ನಲ್ಲಿ ಹತ್ತಿಸಿಕೊಂಡು ಕಪ್ಪನಹಳ್ಳಿ ಮಾರ್ಗವಾಗಿ ಮುಡುಬಾಸಿದ್ದಾಪುರಕ್ಕೆ ಬಸ್ ಬಂದಿತು.

ಪ್ರಯಾಣಿಕರನ್ನು ಇಳಿಸಿ ಶಿಕಾರಿಪುರಕ್ಕೆ ಬಸ್ ಹಿಂದಿರುಗುತ್ತಿದ್ದಾಗ, ಕೋಟಿಪುರ ಗ್ರಾಮದಲ್ಲಿ ಕೆಲವರು ಬಸ್ ನಿಲ್ಲಿಸಿದರು. ತಮ್ಮನ್ನು ಕೆಳಕ್ಕೆ ಇಳಿಸಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ. ಬಸ್ ಚಾಲಕ ಜಗಳ ಬಿಡಿಸಿದ್ದು, ಸದರಿ ಬಸ್ ನಲ್ಲಿಯೇ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದೆನೆ’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕಂಡಕ್ಟರ್ ತಿಳಿಸಿದ್ದಾರೆ.

ಕಾರಣವೇನು? : ಶಿಕಾರಿಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಚಾಲಕನ ಸೀಟಿನ ಕಡೆಯಿಂದ ಬಸ್ ಹತ್ತಲು ಮುಂದಾದ ವಿದ್ಯಾರ್ಥಿಗಳಿಗೆ, ಕಂಡಕ್ಟರ್ ತರಾಟೆಗೆ ತೆಗೆದುಕೊಂಡು ನಿಂದಿಸಿದ್ದಾರೆ ಎನ್ನಲಾಗಿದೆ. ಸದರಿ ವಿಷಯವನ್ನು ಮನೆಗೆ ಆಗಮಿಸಿದ ವಿದ್ಯಾರ್ಥಿಗಳು, ತಮ್ಮ ಪೋಷಕರ ಗಮನಕ್ಕೆ ತಂದಿದ್ದಾರೆ.

ಗ್ರಾಮದ ಮೂಲಕ ಸದರಿ ಬಸ್ ಹಿಂದಿರುಗುತ್ತಿದ್ದ ವೇಳೆ, ಬಸ್ ನಿಲ್ಲಿಸಿ ಕಂಡಕ್ಟರ್ ನನ್ನು ಗ್ರಾಮಸ್ಥರು ವಿಚಾರಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೆಲವರು ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸರ ತನಿಖೆಯ ನಂತರವಷ್ಟೆ ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ. ಸದರಿ ಘಟನೆಯ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Shikaripura, September 18: A case has been registered against three villagers at the rural police station in connection with the alleged assault on a KSRTC bus conductor in Kotipura village of Shikaripura taluk.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →